ಎಸ್.ಎಲ್. ಭೈರಪ್ಪ

From Wikipedia

ಶ್ರೀ ಎಸ್ ಎಲ್ ಭೈರಪ್ಪನವರು
ಶ್ರೀ ಎಸ್ ಎಲ್ ಭೈರಪ್ಪನವರು

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಾದಂಬರಿ ಪ್ರಕಾರ ಹುಲುಸಾಗಿ ಬೆಳೆದು ಅತಿ ಹೆಚ್ಚು ಓದುಗರನ್ನು ತಲುಪಿದೆ. ಒಟ್ಟಾರೆ ಇಪ್ಪತ್ತನೆಯ ಶತಮಾನ ಕಾದಂಬರಿ ಯುಗ ಅನ್ನಿಸಿದೆ. ಈ ಪರಂಪರೆಯಲ್ಲಿ ಜನ ಮನ ಮುಟ್ಟಿದ ಸಾಹಿತಿಗಳು ಬರೆದೇ ಬದುಕು ರೂಪಿಸಿಕೊಂಡವರಿದ್ದಾರೆ. ಇದಲ್ಲದೆ ಬದುಕಿಗೊಂದು ವೃತ್ತಿಯಿದ್ದು ವಿವಿಧ ಓದುಗಳ ನಡುವೆ ಕನ್ನಡ ಸಾಹಿತ್ಯಕ್ಕೆ ಭಾಷೆ, ವಸ್ತು, ವಿನ್ಯಾಸದ ಹೊಸತು ಕೊಟ್ಟವರೂ ಇದ್ದಾರೆ. ಬರವಣಿಗೆ ಪ್ರವೃತ್ತಿಯಾಗಿಸಿಕೊಂಡು, ಅಕೆಡಮಿಕ್ ಆಗಿದ್ದೂ, ಹೆಚ್ಚು ಓದುಗರನ್ನು ತಲುಪಿದ ಜನಪ್ರಿಯ ಕಾದಂಬರಿಕಾರರೆಂದರೆ ಡಾ| ಎಸ್. ಎಲ್. ಭೈರಪ್ಪ ಅವರು.

ತಾವು ಆಯ್ಕೆ ಮಾಡಿಕೊಂಡ ವಸ್ತು, ಅದನ್ನು ನಡೆಸುವ ರೀತಿ, ಅದಕ್ಕೊಂದು ಅಂತ್ಯ ಕೊಡುವ ಲೇಖಕನ ಮನೋಸ್ಥಿತಿ ಬಗ್ಗೆ ಚರ್ಚೆಗಳಲ್ಲಿ ಭಿನ್ನ ಅಭಿಪ್ರಾಯಗಳೂ ಇವೆ. ಇಂಥ ಸಂದರ್ಭದಲ್ಲೂ ಭೈರಪ್ಪನವರ ಕಾದಂಬರಿಗಳು ಬಹು ಓದುಗರ ಚರ್ಚೆಯಲ್ಲಿರುತ್ತವೆ. ಮಾಧ್ಯಮಗಳಲ್ಲಿ ವಿಮರ್ಶೆ ಮೂಲಕ ಭಿನ್ನಾಭಿಪ್ರಾಯಗಳು ಆಗಾಗ್ಗೆ ತಲೆದೋರಿದರೂ ಅದು ಒಂದು ವಲಯದ ಚರ್ಚೆಯೆಂದು ಅಭಿಪ್ರಾಯಿಸುವವರೂ ಇದ್ದಾರೆ.

ಪರಿವಿಡಿ

[ಬದಲಾಯಿಸಿ] ಜೀವನ

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ೧೯೩೪ ಜುಲೈ ೨೬ರಂದು ಹುಟ್ಟಿದ ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು. ಚಿಕ್ಕ ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡು ವಿದ್ಯಾಭ್ಯಾಸ ಕಷ್ಟಪಟ್ಟು ಮಾಡಿದರು. ಗಾಂಧೀಜಿಯವರ ಮೌಲ್ಯಗಳಿಗೆ ಬೆಲೆಕೊಟ್ಟು ಸ್ವಾತಂತ್ರ ಚಳುವಳಿಗೆ ತೊಡಗಿಸಿಕೊಂಡಾಗ ಅವರಿಗೆ ಕೇವಲ ೧೩ ವರ್ಷ!

ಪ್ರೌಢ ಶಿಕ್ಷಣ ಹಾಗೂ ಕಾಲೇಜು ಓದು ಮೈಸೂರಿನಲ್ಲಿ ಮುಂದುವರೆಸಿದ ಭೈರಪ್ಪನವರು ಎಂ. ಎ. ನಲ್ಲಿ ಸುವರ್ಣಪದಕ ದೊಂದಿಗೆ ತೇರ್ಗಡೆಯಾದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿ೦ದ ``ಸತ್ಯ ಮತ್ತು ಸೌಂದರ್ಯ" ಎಂಬ ಇಂಗ್ಲಿಷ್‌ನಲ್ಲಿ ರಚಿಸಿದ ಮಹಾಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿದರು. ಹುಬ್ಬಳ್ಳಿ, ಗುಜರಾತಿನ ಸರದಾರ್ ಪಟೇಲ್ ವಿಶ್ವವಿದ್ಯಾಲಯ, ದೆಹಲಿಗಳಲ್ಲಿ ತಮ್ಮ ಉಪನ್ಯಾಸಕ ವೃತ್ತಿ ಕೈಗೊಂಡ ಭೈರಪ್ಪನವರು, ಶಾಸ್ತ್ರಿಯ ಶಿಸ್ತಿನ ಓದಿನ ನಡುವೆ ಮಹತ್ವದ ಕಾದಂಬರಿಗಳನ್ನು ರಚಿಸಿದ್ದಾರೆ. ೧೯೬೧ ರಲ್ಲಿ `ಧರ್ಮಶ್ರೀ' ಕಾದಂಬರಿ ಪ್ರಕಟಿಸಿ ಇದುವರೆವಿಗೆ ನಾಲ್ಕು ದಶಕಗಳಲ್ಲಿ ೨೧ ಕಾದಂಬರಿಗಳನ್ನು ಬರೆದಿದ್ದಾರೆ. ಆಯಾ ಕಾಲದಲ್ಲಿ ಬಂದ ಅವರ ಕಾದಂಬರಿಗಳೆಲ್ಲಾ ಚರ್ಚೆಗೊಳಗಾಗಿವೆ. ಇಂಗ್ಲಿಷ್ ಭಾಷೆಯೂ ಸೇರಿದಂತೆ ಭಾರತೀಯ ಹಲವು ಭಾಷೆಗಳಿಗೆ ಭೈರಪ್ಪನವರ ಕಾದಂಬರಿಗಳು ಅನುವಾದವಾಗಿವೆ. ಗೃಹಭಂಗ, ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ ಮುಂತಾದವು ಹಿಂದಿ, ಮರಾಠಿಯಲ್ಲಿ ಜನಪ್ರಿಯವಾಗಿವೆ.

ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಚಲನಚಿತ್ರವಾಗಿ ಪ್ರಶಸ್ತಿಗಳಿಸಿವೆ. ವಂಶವೃಕ್ಷಕ್ಕೆ ೧೯೬೬ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೭೫ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. `ಪರ್ವ' ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದದ್ದು. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು, ಮೃತ್ಯುವಿನ ರಹಸ್ಯಾತ್ಮಕತೆಯನ್ನು ಕಾದಂಬರಿಯಲ್ಲಿ ಅರ್ಥಪೂರ್ಣವಾಗಿ ಮೈಗೂಡಿಸಲಾಗಿದೆ. ಲೈಂಗಿಕತೆ ಮತ್ತು ಸಾವುಗಳ ನೆಲೆಯಲ್ಲಿ ದ್ರೌಪದಿ, ಕುಂತಿ, ಮಾದ್ರಿ, ಗಾಂಧಾರಿ ಪಾತ್ರಗಳನ್ನು ಮೂಡಿಸಿದ್ದಾರೆ.

ಕಾದಂಬರಿಗಳಲ್ಲದೆ ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿದ `ಸಾಹಿತ್ಯ ಮತ್ತು ಪ್ರತೀಕ', `ಕಥೆ ಮತ್ತು ಕಥಾವಸ್ತು', `ನಾನೇಕೆ ಬರೆಯುತ್ತೇನೆ' ಎಂಬ ಕೃತಿಗಳನ್ನೂ ಭೈರಪ್ಪ ರಚಿಸಿದ್ದಾರೆ. ಪ್ರಸ್ತುತ ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದಾರೆ. ೧೯೯೯ರಲ್ಲಿ ಕನಕಪುರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭೈರಪ್ಪ ಆಯ್ಕೆ ಆಗಿದ್ದರು.

ಹೆಚ್ಚಿನ ಓದು : ಭೈರಪ್ಪನವರ ಬಾಲ್ಯಕಾಲದ ಹೃದಯಸ್ಪರ್ಶೀ ಚಿತ್ರಣಕ್ಕಾಗಿ ಬೆಳಗೆರೆ ಕೃಷ್ಣಶಾಸ್ತ್ರಿಗಳ "ಮರೆಯಲಾದೀತೇ" ವ್ಯಕ್ತಿಚಿತ್ರ ಸಂಗ್ರಹದಲ್ಲಿ ಭೈರಪ್ಪನವರ ಬಗೆಗಿನ ಅಧ್ಯಾಯವನ್ನು ಓದಿ.

[ಬದಲಾಯಿಸಿ] ಪ್ರಶಸ್ತಿಗಳು

  • ‌ ಎಸ್ ಎಲ್ ಭೈರಪ್ಪನವರಿಗೆ ೨೦೦೫ನೇ ಸಾಲಿನ ಪಂಪ ಪ್ರಶಸ್ತಿ ಲಭಿಸಿದೆ.
  • ಎನ್ ಟಿ ಆರ್‍ ಪ್ರಶಸ್ತಿ, ೨೦೦೭

[ಬದಲಾಯಿಸಿ] ಕೃತಿಗಳು

ಜೀವನಚರಿತ್ರೆ

ತತ್ತ್ವಶಾಸ್ತ್ರ

  • ಸತ್ಯ ಮತ್ತು ಸೌಂದರ್ಯ (೧೯೬೬)
  • ಸಾಹಿತ್ಯ ಮತ್ತು ಪ್ರತೀಕ (೧೯೬೭)
  • ಕಥೆ ಮತ್ತು ಕಥಾವಸ್ತು (೧೯೬೯)
  • ನಾನೇಕೆ ಬರೆಯುತ್ತೇನೆ? (೧೯೮೦)

[ಬದಲಾಯಿಸಿ] ಇತರ ಭಾಷೆಗಳಿಗೆ ಅನುವಾದವಾಗಿರುವ ಕಾದಂಬರಿಗಳು

[ಬದಲಾಯಿಸಿ] ದೃಶ್ಯ ಮಾಧ್ಯಮದಲ್ಲಿ ಭೈರಪ್ಪನವರ ಕಾದಂಬರಿಗಳು

[ಬದಲಾಯಿಸಿ] ಚಲನಚಿತ್ರ

[ಬದಲಾಯಿಸಿ] ಟಿ.ವಿ. ಧಾರಾವಾಹಿ

  • ಗೃಹಭಂಗ

[ಬದಲಾಯಿಸಿ] ಹೊರಗಿನ ಸಂಪರ್ಕಗಳು

ಇತರ ಭಾಷೆಗಳು