ಕವಿರಾಜಮಾರ್ಗ
From Wikipedia
ಕನ್ನಡದಲ್ಲಿ ಇದುವರೆಗೆ ಲಭ್ಯವಾಗಿರುವ ಗ್ರಂಥಗಳಲ್ಲಿ ಅತ್ಯಂತ ಹಳೆಯದಾದದ್ದು ಕವಿರಾಜಮಾರ್ಗ. ಇದೊಂದು ಲಕ್ಷಣ ಗ್ರಂಥ. ಇದನ್ನು ಕ್ರಿ.ಶ. 850 ರ ಆಸುಪಾಸಿನಲ್ಲಿ ರಚಿಸಲಾಗಿದೆ. ಕರ್ತೃ ಶ್ರೀವಿಜಯನೆಂಬುದು ಬಹುತೇಕ ವಿದ್ವಾಂಸರ ಅಭಿಮತವಾಗಿದೆ. ಗ್ರಂಥದ ಮೊದಲಿಗೆ ಅಮೋಘವರ್ಷ ದೊರೆಯ ಹೆಸರು ಬಂದಿರುವುದರಿಂದ ಇದನ್ನು ಆತನ ಆಳ್ವಿಕೆಯ ಅವಧಿಯಲ್ಲೇ ರಚಿಸಿದ್ದಿರಬಹುದಾಗಿದೆ.
ಎಲ್ಲ ದೃಷ್ಟಿಯಿಂದಲೂ ಇದೊಂದು ವಿಶಿಷ್ಟ ಗ್ರಂಥ. ಕನ್ನಡದಲ್ಲಿ ತನಗಿಂತ ಮೊದಲು ಆಗಿಹೋದ ಕವಿಗಳನ್ನು ಶ್ರೀವಿಜಯನು ಹೆಸರಿಸಿದ್ದಾನೆ. ಇದರಿಂದಾಗಿ ಕನ್ನಡ ಸಾಹಿತ್ಯವು ಬಹಳ ಶ್ರೀಮಂತವಾಗಿತ್ತು ಎಂಬುದನ್ನು ತಿಳಿಯಬಹುದಾಗಿದೆ. ಕವಿಯು ಕನ್ನಡ ನಾಡಿನ ಬಗ್ಗೆ ಹಾಗೂ ಕನ್ನಡಿಗರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾನೆ. ಕನ್ನಡದಲ್ಲಿ ಆ ಕಾಲಕ್ಕೆ ಪ್ರಸಿದ್ಧವಾಗಿದ್ದ ದೇಸೀ ಸಾಹಿತ್ಯ ಪ್ರಕಾರಗಳ ಬಗ್ಗೆಯೂ ಮಾತನಾಡಿದ್ದಾನೆ. ಅವುಗಳಲ್ಲಿ, 'ಬೆದಂಡೆ', 'ಚೆತ್ತಾಣ', ಹಾಗೂ 'ಒನಕೆವಾಡು'ಗಳು ಮುಖ್ಯವಾದುವು.
ಕವಿರಾಜಮಾರ್ಗದಲ್ಲಿ ಬಂದಿರುವ ಕನ್ನಡನಾಡಿನ ವರ್ಣನೆ:
ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ
ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ
ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್
ಕಿಸುವೊಳಲು ಪಟ್ಟದಕಲ್ಲಿಗೆ ಮೊದಲಿದ್ದ ಹೆಸರು. ಪುಲಿಗೆರೆ ಇಂದಿನ ಲಕ್ಷ್ಮೇಶ್ವರ (ಗದಗ್ ಜಿಲ್ಲೆ). ಕೊಪಣ ಇಂದಿನ ಕೊಪ್ಪಳ. ಒಕುಂದ ಬೆಳಗಾವಿ ಜಿಲ್ಲೆಯಲ್ಲಿರುವ ಒಕ್ಕುಂದ.