ಭಾರತದ ಇತಿಹಾಸ
From Wikipedia
ಭಾರತೀಯ ಉಪಖಂಡದ ಇತಿಹಾಸ![]() ![]() ![]() ![]() ![]() ![]() ![]() |
|||||
---|---|---|---|---|---|
ಶಿಲಾಯುಗ | ಕ್ರಿ.ಪೂ.೭೦,೦೦೦– ೭೦೦೦ | ||||
ಮೆಹರಗಢ ಸಂಸ್ಕೃತಿ | ಕ್ರಿ.ಪೂ.೭೦೦೦– ೩೩೦೦ | ||||
ಸಿಂಧೂ ನದಿ ನಾಗರಿಕತೆ | ಕ್ರಿ.ಪೂ.೩೩೦೦–೧೭೦೦ | ||||
ಹರಪ್ಪ ನಾಗರಿಕತೆ | ಕ್ರಿ.ಪೂ.೧೭೦೦–೧೩೦೦ | ||||
ವೈದಿಕ ನಾಗರಿಕತೆ | ಕ್ರಿ.ಪೂ.೧೫೦೦–೫೦೦ | ||||
- ಪ್ರಾಚೀನ ರಾಜಮನೆತನಗಳು | - ಕ್ರಿ.ಪೂ.೧೨೦೦–೭೦೦ | ||||
ಮಹಾ ಜನಪದಾಸ್ | ಕ್ರಿ.ಪೂ.೭೦೦–೩೦೦ | ||||
ಮಗಧ ಸಾಮ್ರಾಜ್ಯ | ಕ್ರಿ.ಪೂ.೬೮೪–೨೬ | ||||
- ಮೌರ್ಯ ಸಾಮ್ರಾಜ್ಯ | - ಕ್ರಿ.ಪೂ.೩೨೧–೧೮೪ | ||||
ನಡುಗಾಲದ ರಾಜಮನೆತನಗಳು | ಕ್ರಿ.ಪೂ.೨೦೦– ಕ್ರಿ.ಶ.೧೨೭೯ | ||||
- ಪ್ರಾಚೀನ ತಮಿಳು ರಾಜರು | - ಕ್ರಿ.ಪೂ.೨೦೦–ಕ್ರಿ.ಶ.೨೦೦ | ||||
- ಕುಶಾನ ಸಾಮ್ರಾಜ್ಯ | - ಕ್ರಿ.ಶ.೬೦–ಕ್ರಿ.ಶ.೨೪೦ | ||||
- ಗುಪ್ತ ಸಾಮ್ರಾಜ್ಯ | - ೨೪೦–೫೫೦ | ||||
- ಚಾಲುಕ್ಯ ಸಾಮ್ರಾಜ್ಯ | - ೫೪೩–೧೨೦೦ | ||||
- ಪಾಳ ಸಾಮ್ರಾಜ್ಯ | - ೭೫೦–೧೧೭೪ | ||||
- ಚೋಳ ಸಾಮ್ರಾಜ್ಯ | - ೮೪೮–೧೨೭೯ | ||||
ಮುಸ್ಲಿಮ್ ಸುಲ್ತಾನರು | ೧೨೧೦–೧೫೯೬ | ||||
- ದೆಹಲಿ ಸುಲ್ತಾನರು | - ೧೨೧೦–೧೫೨೬ | ||||
- ಡೆಕ್ಕನ್ ಸುಲ್ತಾನರು | - ೧೪೯೦–೧೫೯೬ | ||||
ಹೊಯ್ಸಳ ಸಾಮ್ರಾಜ್ಯ | ೧೦೪೦–೧೩೪೬ | ||||
ವಿಜಯನಗರ ಸಾಮ್ರಾಜ್ಯ | ೧೩೩೬–೧೫೬೫ | ||||
ಮೊಘಲ್ ಸಾಮ್ರಾಜ್ಯ | ೧೫೨೬–೧೭೦೭ | ||||
ಮರಾಠ ಸಾಮ್ರಾಜ್ಯ | ೧೬೭೪–೧೮೧೮ | ||||
ಬ್ರಿಟಿಷ್ ಆಳ್ವಿಕೆ | ೧೭೫೭–೧೯೪೭ | ||||
ಆಧುನಿಕ ಭಾರತ | ೧೯೪೭ ನಂತರ | ||||
ಇತರೆ ಇತಿಹಾಸಗಳು ಭಾರತ · ಪಾಕಿಸ್ತಾನ · ಬಾಂಗ್ಲಾದೇಶ ಶ್ರೀಲಂಕಾ · ನೇಪಾಳ · ಭೂತಾನ್ · ಮಾಲ್ಡೀವ್ಸ್ · ಟಿಬೆಟ್ |
|||||
ಪ್ರಾಂತೀಯ ಇತಿಹಾಸಗಳು ಪಂಜಾಬ್ · ದಕ್ಷಿಣ ಭಾರತ · ಅಸ್ಸಾಂ ಪಾಕಿಸ್ತಾನಿ ಸ್ಥಳಗಳು · ಸಿಂಧ್ · ಬಂಗಾಳ |
|||||
ವಿಶೇಷ ಇತಿಹಾಸಗಳು ರಾಜಮನೆತನಗಳು · ಆರ್ಥಿಕ ಇತಿಹಾಸ · ಭಾಷೆಗಳು ಸಾಹಿತ್ಯ · ನಾವ್ಯ · ಸೇನೆ · ಗಣಿತ ವಿಜ್ಞಾನ ಮತ್ತು ತಂತ್ರಜ್ಞಾನ · ಕಾಲಾವಧಿ |
|||||
|
ಭಾರತದ ಇತಿಹಾಸವು ಆಧುನಿಕ ಮಾನವನ (ಹೋಮೋ ಸೇಪಿಯನ್ಸ್) ಪುರಾತತ್ವ ಪಳೆಯುಳಿಕೆಗಳ ಕಾಲದಿಂದ, ಎಂದರೆ ಸುಮಾರು ೩೪೦೦೦ ವರ್ಷಗಳಿಂದ, ಆರಂಭವಾಗುತ್ತದೆ. ಭಾರತದ ಕಂಚಿನ ಯುಗದ ಸಂಸ್ಕೃತಿಗಳು ಪ್ರಾಚೀನ ಮಧ್ಯ ಏಷ್ಯಾದ ಸಂಸ್ಕೃತಿಗಳಿಗೆ ಸಮಕಾಲೀನವಾದವು. ಭಾರತದ ಇತಿಹಾಸವೆನ್ನುವುದು ಸಂಪೂರ್ಣ ಭಾರತ ಉಪಖಂಡದ, ಎಂದರೆ ಇಂದಿನ ಭಾರತ, ಪಾಕಿಸ್ತಾನ, ಬಾಂಗ್ಲದೇಶ, ಶ್ರೀಲಂಕ, ನೇಪಾಳ, ಹಾಗೂ ಭೂತಾನ ದೇಶಗಳ ಇತಿಹಾಸಗಳನ್ನು ಒಳಗೊಂಡಿದೆ.
[ಬದಲಾಯಿಸಿ] ಪಕ್ಷಿನೋಟ
೫೦೦೦ ವರ್ಷಗಳ ಹಿಂದೆ ಇದ್ದ ಸಿಂಧೂ ನದಿ ನಾಗರಿಕತೆಯು ಜಗತ್ತಿನಲ್ಲೇ ಪುರಾತನವಾದ ಸಂಸ್ಕೃತಿಗಳಲ್ಲೊಂದು. ಈ ಸಮಯದ ಇತಿಹಾಸ ವಿವಾದಾತ್ಮಕವಾಗಿದೆ. ಇಂಡೋ-ಆರ್ಯನ್ನರ ವಲಸೆ ಸಿದ್ಧಾಂತದ ಪ್ರಕಾರ, ಅಲೆಮಾರಿ ಆರ್ಯನ್ನರು ಕ್ರಿ.ಪೂ ೨೦೦೦-೧೫೦೦ರಲ್ಲಿ ಮಧ್ಯ ಏಷ್ಯಾದ (ಉತ್ತರ ಇರಾನ್) ಭಾಗಗಳಿಂದ, ಇಂದಿನ ಭಾರತೀಯ ಉಪಖಂಡದ ವಾಯುವ್ಯ ಭಾಗಗಳಲ್ಲಿ ಬಂದು ನೆಲೆಸಿದರು. ಸ್ಥಳೀಯ ದ್ರಾವಿಡರೊಂದಿಗಿನ ಇವರ ಸಂಪರ್ಕವು ಭಾರತದ ಶಾಸ್ತ್ರೀಯ ಸಂಸ್ಕೃತಿಯ ರಚನೆಗೆ ಕಾರಣವಾಯಿತು ಎಂದು ಪರಿಗಣಿಸಲಾಗುತ್ತದೆ.[೧] ಇತರ ಸಂಶೋಧಕರು ಸಿಂಧೂ ಸಂಸ್ಕೃತಿ ಆರ್ಯರದೆಂದೂ ಹಾಗು ಕ್ರಿ.ಪೂ. ೬ ನೇ ಶತಮಾನ ಹಾಗು ಕ್ರಿ.ಪೂ. ೨ನೇ ಶತಮಾನದ ಮಧ್ಯದಲ್ಲಿ ಇಲ್ಲಿಂದ ಆರ್ಯರು ಯೂರೋಪ್ ಹಾಗು ಇತರ ಜಾಗಗಳಿಗೆ ಹರಡಿದರೆಂದು ಅಭಿಪ್ರಾಯ ಪಟ್ಟಿದ್ದಾರೆ. [೨]
ಕ್ರಿ.ಪೂ. ೬ನೇ ಶತಮಾನದಲ್ಲಿ ಮಹಾವೀರ ಮತ್ತು ಗೌತಮ ಬುದ್ಧರ ಜನನವು ಭಾರತದ ದಾಖಲಿತ ಇತಿಹಾಸದ ಪ್ರಾರಂಭ. ಮುಂದಿನ ಸುಮಾರು ೧೫೦೦ ವರ್ಷಗಳಲ್ಲಿ ಭಾರತೀಯ ಸಂಸ್ಕೃತಿಯು ರೂಪುಗೊಂಡಿತು. ಕೆಲ ಐತಿಹಾಸ ತಜ್ಞರ ಅಭಿಪ್ರಾಯದಲ್ಲಿ, ಸುಮಾರು ಕ್ರಿ.ಶ. ೧ ರಿಂದ ೧೫ನೇ ಶತಮಾನದ ಕಾಲದಲ್ಲಿ ಪ್ರಪಂಚದಲ್ಲೇ ದೊಡ್ಡದಾದ ಅರ್ಥವ್ಯವಸ್ಥೆಯನ್ನು[೩] ಹೊಂದಿದ್ದ ಭಾರತ ಉಪಖಂಡವು ಜಗತ್ತಿನ ಆದಾಯ-ವ್ಯಯಗಳ ಮೂರನೆ ಒಂದು ಭಾಗವನ್ನು ನಿಯಂತ್ರಿಸುತ್ತಿತ್ತು [೪]. ನಂತರ ಮೊಘಲರ ಕಾಲದಲ್ಲಿ ನಾಲ್ಕನೇ ಒಂದಕ್ಕಿಳಿದ ಈ ಭಾಗ ಯುರೋಪಿಯನ್ನರ ಕಾಲದಲ್ಲಿ ಶೀಘ್ರವಾಗಿ ಕುಸಿಯಿತು.
೮ ರಿಂದ ೧೨ನೇ ಶತಮಾನದಲ್ಲಿ ನೆಡೆದ ಅರಬ್ ಮತ್ತು ಮಧ್ಯ ಏಷ್ಯಾದ ಸೈನ್ಯೆದಾಳಿಗಳಿಂದ ಪ್ರಾರಂಭವಾದ ಇಸ್ಲಾಮಿ ಆಕ್ರಮಣಗಳ ಪರಿಣಾಮದ ಸ್ವರೂಪವಾಗಿ ೧೬ನೇ ಶತಮಾನದೊಳಗೆ ಕ್ರಮೇಣ ಭಾರತದಲ್ಲಿ ಮೋಘಲ್ ಸಾಮ್ರಾಜ್ಯದ ಸ್ಥಾಪನೆಯಾಯಿತು. ಇದರೊಂದಿಗೆ ೧೫ನೇ ಶತಮಾನದಿಂದ ೧೬ನೇ ಶತಮಾನದ ಮಧ್ಯದವರೆಗೆ ನೆಡೆದ ಯುರೋಪಿಯನ್ ವ್ಯಾಪಾರಿಗಳ ಆಗಮನವು ಕ್ರಮೇಣ ೧೮ನೇ ಶತಮಾನದ ಕೊನೆಯೊಳಗೆ ಭಾರತವನ್ನು ಬ್ರಿಟಿಷ್ ವಸಾಹತುಶಾಯಿಗೆ ಅನುವು ಮಾಡಿತು. ಭಾರತೀಯರ ಸಶಸ್ತ್ರಪಡೆಗಳು ಮತ್ತು ಬ್ರಿಟಿಷ್ ಪಡೆಗಳೂ ಮೊದಲನೆಯ ಮತ್ತು ಎರಡನೆಯ ಮಹಾಯುಧ್ಧದಲ್ಲಿ ಜೊತೆಯಾಗಿ ಹೋರಾಡಿದುವು. ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನೆಡೆದ ಅಹಿಂಸಾತ್ಮಕ ಚಳುವಳಿಯು ಭಾರತಕ್ಕೆ ೧೯೪೭ರಲ್ಲಿ ಬ್ರಿಟೀಷರಿಂದ ಮುಕ್ತಿಯನ್ನು ದೊರಕಿಸುವಲ್ಲಿ ಯಶಸ್ವಿಯಾಯಿತು. ಆದರೆ ಭಾರತೀಯ ಉಪಖಂಡವು ಇಬ್ಭಾಗವಾಗಿ, ಜಾತ್ಯಾತೀತ ಭಾರತ ಗಣತಂತ್ರವೂ ಮತ್ತು ಇಸ್ಲಾಮಿಕ್ ರಾಜ್ಯ ಪಾಕಿಸ್ತಾನಗಳೂ ರಚನೆಯಾದವು. ೧೯೭೧ರಲ್ಲಿ ಎರಡೂ ದೇಶಗಳ ನಡುವೆ ನಡೆದ ಯುದ್ಧದ ಪರಿಣಾಮವಾಗಿ ಪೂರ್ವ ಪಾಕಿಸ್ತಾನವು ಸ್ವತಂತ್ರವಾಗಿ ಬಾಂಗ್ಲಾದೇಶದ ಸೃಷ್ಟಿಯಾಯಿತು. ೨೧ನೇ ಶತಮಾನದಲ್ಲಿ ೧ ಬಿಲಿಯನ್ಗಿಂತ ಅಧಿಕ ಜನಸಂಖ್ಯೆ ಹೊಂದಿರುವ ಪ್ರಪಂಚದ ಅತೀ ದೊಡ್ಡ ಜನತಂತ್ರ. ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಸಾಮರ್ಥ್ಯದಿಂದ, ಪ್ರಪಂಚದ ನಾಲ್ಕನೇ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿದೆ.
[ಬದಲಾಯಿಸಿ] ಶಿಲಾಯುಗ ಸಂಸ್ಕೃತಿ: ಕ್ರಿ.ಪೂ. ೭೦,೦೦೦ - ೫೦೦೦
೫೦೦,೦೦೦ ವರ್ಷಗಳಿಗಿಂತ ಹಳೆಯ ಹೋಮೊ ಎರೆಕ್ಟಸ್ ಜಾತಿಯ ಪೂರ್ವಮಾನವರ ಪಳೆಯುಳಿಕೆಗಳು ನರ್ಮದಾ ನದಿ ಕಣಿವೆಯಲ್ಲಿ ಸಿಕ್ಕಿವೆ [೫]. ಆಧುನಿಕ ಮಾನವ ಭರತ ಖಂಡಕ್ಕೆ ಸುಮಾರು ೭೦,೦೦೦ದಿಂದ ೮೦,೦೦೦ ವರ್ಷಗಳ ಹಿಂದೆ ಆಗಮಿಸಿದನೆಂದು ಆಧುನಿಕ ವಿಜ್ಞಾನದ ಅಭಿಪ್ರಾಯ[೬]. ಮಧ್ಯ ಪ್ರದೇಶದ ಭಿಂಬೆಟ್ಕಾದಲ್ಲಿ ೯,೦೦೦ ವರ್ಷಗಳ ಹಳೆಯ ಗುಹೆಗಳಲ್ಲಿನ ಮಾನವನ ವಸತಿಗಳು ಮತ್ತು ಚಿತ್ರಕಲೆ ಆಧುನಿಕ ಮಾನವನ ಮೊದಲ ನಿಶ್ಚಿತ ಕುರುಹುಗಳಾಗಿವೆ. ಸುಮಾರು ೭,೦೦೦ ವರ್ಷಗಳ ಹಳೆಯ ಪಳಯುಳಿಕೆಗಳು ಗುಜರಾತಿನ ಖಂಬತ್ ಕೊಲ್ಲಿಯಲ್ಲಿ ನೀರಿನಡಿಯಲ್ಲಿ ಸಿಕ್ಕಿವೆ. [೭]. ಇಂದಿನ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ೭,೦೦೦ ವರ್ಷಗಳಷ್ಟು ಹಳೆಯ ಕಲ್ಲುಮಣ್ಣುಗಳಿಂದ ನಿರ್ಮಿತ ವಸತಿಗಳು ದೊರಕಿವೆ. ಇದಕ್ಕೆ ಮೆಹರ್ಘರ್ ಸಂಸ್ಕೃತಿ ಎಂದು ಹೆಸರಿಡಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಹಳೆಯ ಕೃಷಿಯ ಕುರುಹುಗಳು ಇಲ್ಲಿ ದೊರೆತಿವೆ. ಸುಮಾರು ಕ್ರಿ.ಪೂ. ೩,೫೦೦ಕ್ಕೆ ಇಲ್ಲಿನ ಅವಶೇಷಗಳು ಮುಕ್ತಾಯವಾಗುತ್ತವೆ. ಇದು ಸಿಂಧೂ ನಾಗರೀಕತೆಯೊದಿಂಗೆ ವಿಲಿನವಾಗಿರಬಹುದೆಂದು ನಂಬಲಾಗಿದೆ.
[ಬದಲಾಯಿಸಿ] ಕಂಚಿನ ಯುಗ
ಭಾರತೀಯ ಉಪಖಂಡದಲ್ಲಿನ ಕಂಚಿನ ಯುಗದ ನಾಗರೀಕತೆಗಳು ನಾಗರಿಕ ವಸತಿಗಳ ಮತ್ತು ಹಿಂದೂ ಧರ್ಮದ ತಿರುಳಾದ ವೈದಿಕ ನಂಬುಗೆಗಳ ಬೆಳವಣಿಗೆ ಸೇರಿದಂತೆ ಆಧುನಿಕ ಭಾರತೀಯ ನಾಗರೀಕತೆಗೆ ಅಡಿಪಾಯ ಹಾಕಿದವು. ಸಿಂಧೂ ಕಣಿವೆ ಸಂಸ್ಕೃತಿಯ ಬೆಳವಣಿಗೆ ಮತ್ತು ಕಾಲಾನುಸಾರ ಅವನತಿ ಮತ್ತು ಭಾರತ ಉಪಖಂಡಕ್ಕೆ ಮಧ್ಯ ಏಷಿಯಾದಿಂದ ಅಲೆಮಾರಿ ಜನರ ವಲಸೆ ಈ ಅವಧಿಯಲ್ಲಿ ಅದರ ಇತಿಹಾಸವನ್ನು ರೂಪಿಸಿತು ಎಂದು ಅನೇಕ ಇತಿಹಾಸಕಾರರು ಹೇಳುತ್ತಾರೆ .
[ಬದಲಾಯಿಸಿ] ಸಿಂಧೂತಟದ ನಾಗರೀಕತೆ ಕ್ರಿ.ಪೂ ೩೩೦೦-೧೫೦೦
ಸಿಂಧೂ ನದಿಯ ತಟದಲ್ಲಿ ಕ್ರಿ.ಪೂ. ೨೫೦೦ರ ಸುಮಾರಿನಲ್ಲಿ ನೀರಾವರಿ ಆರಂಭವಾಯಿತು. ಇದರೊಂದಿಗೆ ಪ್ರಗತಿಗೊಂಡ ನಾಗರೀಕತೆ ಸಿಂಧು ತಟದ ನಾಗರೀಕತೆ ಅಥವ ಸಿಂಧು ಕಣಿವೆ ನಾಗರೀಕತೆ (Indus Valley Civilization) ಎಂದು ಕರೆಯಲ್ಪಟ್ಟಿದೆ. ಈ ನಾಗರೀಕತೆ ಸುಮಾರು ಕ್ರಿ.ಪೂ. ೨೫೦೦ರಿಂದ ಕ್ರಿ.ಪೂ. ೧೯೦೦ರ ವರೆಗೆ ಪ್ರಗತಿಗೊಂಡಿತು. ಈ ನಾಗರೀಕತೆಯ ಮುಖ್ಯ ನಗರಿಗಳಾದ ಹರಪ್ಪ ಮತ್ತು ಮೋಹೆಂಜದಾರೊ ಭಾರತದ ಮೊದಲ ನಗರಿಗಳೆಂದು ಪರಿಗಣಿಸಲ್ಪಟ್ಟಿವೆ. ಸಿಂಧೂ ನದಿ ಮತ್ತದರ ಉಪನದಿಗಳಾದ ಗಾಗ್ಗರ್ ನದಿ, ಹಾಕ್ರ ನದಿಗಳ ತಟಗಳಲ್ಲಿ ಕೇಂದ್ರೀಕೃತವಾಗಿದ್ದ ಈ ನಾಗರೀಕತೆ, ಮುಂದೆ ಪಶ್ಚಿಮಕ್ಕೆ ಗಂಗೆ-ಯಮುನೆ ನದಿಗಳ ಮಧ್ಯದ ದೊಆಬ್ ಪ್ರದೇಶದವರೆಗೆ, ದಕ್ಷಿಣಕ್ಕೆ ಈಗಿನ ಮಹಾರಾಷ್ಟ್ರದವರೆಗೆ, ಪೂರ್ವಕ್ಕೆ ಈಗಿನ ಇರಾನ್ ದೇಶದ ಸೀಮೆಯವರೆಗೆ ಮತ್ತು ಉತ್ತರಕ್ಕೆ ಅಫ್ಘಾನಿಸ್ತಾನದವರೆಗೆ ಹರಡಿತ್ತು [ಸಾಕ್ಷ್ಯಾಧಾರ ಬೇಕಾಗಿದೆ].
ಸಮಕಾಲೀನ ನಾಗರೀಕತೆಗಳಾದ ಪುರಾತನ ಈಜಿಪ್ಟ ಹಾಗು ಸುಮೇರಿಯಗಳಿಗಿಂತ ದೊಡ್ಡದಾಗಿದ್ದಲ್ಲದೆ, ಸಿಂಧೂ ನಾಗರೀಕತೆಯು ಉತ್ತಮ ನಗರ ರಚನಕ್ರಮಗಳನ್ನು ಹೊಂದಿತ್ತು. ಇಟ್ಟಿಗೆಗಳ ಉಪಯೋಗ, ರಸ್ತೆ ಬದಿಯ ಚರಂಡಿ ವ್ಯವಸ್ಥೆ, ಮತ್ತು ಬಹುಮಹಡಿ ಕಟ್ಟಡಗಳು ಈ ರಚನಕ್ರಮದ ವೈಶಿಷ್ಟ್ಯಗಳು. ಹರಪ್ಪ ಮತ್ತು ಮೊಹೆನ್ಜದಾರೊಗಳಲ್ಲದೆ, ಲೋಥಾಲ್, ಗನ್ವೇರಿವಾಲ, ಧೋಲವೀರ, ಕಾಳಿಭಂಗ ಮತ್ತು ರಾಕಿಗರ್ಹಿ ಮುಂತಾದ ಜಾಗಗಳಲ್ಲೂ ಈ ಸಮಯದ ನಗರಗಳ ಅವಶೇಶಗಳು ದೊರೆತಿವೆ. ಇಲ್ಲಿಯವರೆಗೆ ಒಟ್ಟಾಗಿ ಸುಮಾರು ೨,೫೦೦ ನೆಲೆಗಳು ದೊರೆತಿವೆ, ಮುಖ್ಯವಾಗಿ ಸಿಂಧೂ ನದಿಯ ಪೂರ್ವಕ್ಕೆ. ಈ ನಾಗರೀಕತೆಯ ಜನಸಂಖ್ಯೆ ೫೦ ಲಕ್ಷವಿದ್ದಿರಬಹುದೆಂದು ಕೆಲವು ತಜ್ಞರ ಅಭಿಪ್ರಾಯ. ಇದಲ್ಲದೆ, ಈ ಇಡೀ ನಾಗರೀಕತೆಯಲ್ಲಿ ಉಪಯೋಗಿಸಲ್ಪಟ್ಟ ಮೌಲ್ಯಮಾಪನ ಕ್ರಮ ಒಂದೆ ಆಗಿದ್ದರಿಂದ, ಈ ಇಡೀ ನಾಗರೀಕತೆ ಪ್ರಾಯಶಃ ಒಂದೇ ರಾಜ್ಯವಾಗಿರಬಹುದೆಂದು ಊಹಿಸಲಾಗಿದೆ. ಸುಮೇರಿಯಾದ ದಾಖಲೆಗಳಲ್ಲಿ ಉಲ್ಲೇಖಿತವಾಗಿರುವ 'ಮೆಲುಹ' ಇದೇ ನಾಗರೀಕತೆಯಿರಬಹುದೆಂದು ನಂಬಲಾಗಿದೆ.
ಕೆಲವು ಭೌಗೋಳಿಕ ಬದಲಾವಣೆಗಳು ಮತ್ತು ಹವಾಮಾನದ ವೈಪರೀತ್ಯಗಳು ಈ ನಾಗರಿಕತೆಯ ಪತನವಾಗಲು ಕಾರಣ ಎಂದಿ ನಂಬಲಾಗಿದೆ. ಕ್ರಿ.ಪೂ. ೨೬೦೦ರಷ್ಟರಲ್ಲಿ ನೀರಾವರಿ, ಆಹಾರ ಧಾನ್ಯಗಳನ್ನು ಸಂರಕ್ಷಿಸಲು ಉಗ್ರಾಣಗಳು, ಸಾರ್ವಜನಿಕ ರಸ್ತೆಗಳು, ಮತ್ತು ಇಟ್ಟಿಗೆಯಿಂದ ನಿರ್ಮಿಸಲಾದ ಚರಂಡಿಗಳ ನಿರ್ಮಾಣ - ಇವೇ ಮುಂತಾದ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಿದ್ದರು. ಕ್ರಿ.ಪೂ. ಎರಡನೇ ಸಹಸ್ರಮಾನದ ಮಧ್ಯದಲ್ಲಿ ಸಿಂಧೂ ನದಿಯ ಕಣಿವೆಯಲ್ಲಿದ್ದ ಬಹುತೇಕ ಪ್ರದೇಶಗಳು ಜನರಹಿತವಾದವು.
[ಬದಲಾಯಿಸಿ] ವೇದಕಾಲೀನ ಸಂಸ್ಕೃತಿ ಕ್ರಿ.ಪೂ ೧೯೦೦-೫೦೦
ವೇದಗಳನ್ನು, ವೈದಿಕ ಸಂಸ್ಕೃತದಲ್ಲಿ ರಚಿಸಲಾಗಿದ್ದು, ಇವುಗಳನ್ನು ಇಲ್ಲಿಯವರೆಗೂ ತಿಳಿದಿರುವ ಅತಿ ಪ್ರಾಚೀನ ಗ್ರಂಥಗಳಲ್ಲಿ ಪರಿಗಣಿಸಲಾಗಿದೆ. ವೇದಗಳಿಗೆ ನಿಕಟ ಸಂಬಂಧದ ವೇದಕಾಲೀನ ಸಂಸ್ಕೃತಿಯು ಇಂಡೋ-ಆರ್ಯನ್ ಮೂಲದ್ದಾಗಿತ್ತು. ಒಂದು ಕಡೆ, ಈ ನಾಗರೀಕತೆ ಮತ್ತು ಸಿಂಧೂ ಕಣಿವೆಯ ನಾಗರೀಕತೆಗೂ ಇರುವ ಸಂಬಂಧ , ಮತ್ತೊಂದು ಕಡೆ ಇಂಡೋ-ಆರ್ಯರು ಭಾರತಕ್ಕೆ ಬಂದಿರಬಹುದಾದ ಸಾಧ್ಯತೆ, ಇವೆರಡೂ ವಿವಾದಾಸ್ಪದ ವಿಷಯಗಳಾಗಿವೆ.ಪ್ರಾರಂಭದ ವೇದಕಾಲದ ಸಮಾಜವು ಪಶುಪಾಲನೆಯನ್ನು ಪ್ರಧಾನವಾಗಿ ಅವಲಂಬಿಸಿತ್ತು. ಋಗ್ವೇದದ ನಂತರ , ಆರ್ಯರ ಸಮಾಜವು ಹೆಚ್ಚು ಹೆಚ್ಚು ಕೃಷಿಯತ್ತ ಗಮನ ಕೊಡತೊಡಗಿತು. ನಾಲ್ಕು ವರ್ಣ ಅಥವಾ ಜಾತಿಯಾಗಿ ವಿಂಗಡಿಸಿದ ವರ್ಣಾಶ್ರಮ ಪದ್ಧತಿ ರೂಢಿಯಲ್ಲಿತ್ತು. ಅನೇಕ ಸಣ್ಣ ರಾಜ್ಯಗಳು ವಿಲೀನವಾಗಿ , ಕುರು , ಪಾಂಚಾಲ ಮುಂತಾದ ಕೆಲವೇ ದೊಡ್ಡ ರಾಜ್ಯಗಳಾದವು. ಇವು ಆಗಾಗ ಪರಸ್ಪರ ಯುದ್ಧಗಳಲ್ಲಿ ತೊಡಗಿರುತ್ತಿದ್ದವು.
ಹಿಂದೂ ಧರ್ಮದ ಪ್ರಧಾನ ಗ್ರಂಥಗಳಾದ ವೇದಗಳಲ್ಲದೆ, ರಾಮಾಯಣ, ಮಹಾಭಾರತದಂತಹ, ಭಗವದ್ಗೀತೆಯೂ ಸೇರಿದಂತೆ, ಮಹಾಗ್ರಂಥಗಳ ರಚನೆಯೂ , ಮುಖೋಕ್ತ ರೂಪದಲ್ಲಿ, ಈ ಕಾಲದಲ್ಲಿಯೇ ಆಗಿರಬೇಕು ಎಂದು ಹೇಳಲಾಗಿದೆ. ಉತ್ಖನನಗಳಲ್ಲಿ ದೊರಕಿದ ಕಂದು ಬಣ್ಣದ ಮಡಿಕೆ,ಕುಡಿಕೆಗಳು, ಪ್ರಾರಂಭ ಕಾಲದ ಇಂಡೋ-ಆರ್ಯರ ಕಾಲದ್ದಿರಬಹುದು ಎಂದು ಊಹಿಸಲಾಗಿದೆ.ಕ್ರಿ.ಪೂ ೧೦೦೦ ಸುಮಾರಿನ ಕುರುರಾಜ್ಯದ ಅವಧಿಯು ಕಪ್ಪು ಮತ್ತು ಕೆಂಪು ಬಣ್ಣದ ಪಾತ್ರೆ ಪಡಗಗಳ ಕಾಲವಾಗಿದ್ದು , ಈಶಾನ್ಯ ಭಾರತದಲ್ಲಿ ಕಬ್ಬಿಣದ ಯುಗದ ಆರಂಭದ ಕಾಲವಾಗಿತ್ತು. ಅಥರ್ವವೇದವೂ ಬಹುತೇಕ ಇದೇ ಕಾಲದಲ್ಲಿಯೇ (ಕ್ರಿ.ಪೂ ೧೦೦೦) ಸೃಷ್ಟಿಯಾಗಿದೆ.
ಉತ್ತರಭಾರತದ ಅನೇಕ ಕಡೆಗಳಲ್ಲಿ ಕಂಡುಬಂದ Painted Grey Ware ಮಧ್ಯ ವೈದಿಕ ಕಾಲದ ಕುರುಹಾಗಿದೆ. ಇದರ ನಂತರ , ಕ್ರಿ.ಪೂ ಆರನೆಯ ಶತಮಾನದಲ್ಲಿ ನಗರೀಕರಣದ ಅಲೆಯು ಅಫ್ಘಾನಿಸ್ತಾನದಿಂದ , ಬಂಗಾಳದವರೆಗಿನ ಉಪಖಂಡವನ್ನು ಆವರಿಸಿತು. ಅನೇಕ ರಾಜ್ಯಗಳು ಮತ್ತು ಗಣರಾಜ್ಯಗಳು ಗಂಗಾ ನದಿಯ ತಪ್ಪಲು ಪ್ರದೇಶದಲ್ಲಿ ಮತ್ತು ದಖ್ಖನಿ ಪ್ರದೇಶದ ಉತ್ತರಭಾಗದಲ್ಲಿ ತಲೆ ಎತ್ತಲಾರಂಭಿಸಿದವು. ಇವುಗಳಲ್ಲಿ ಹದಿನಾರನ್ನು ಮಹಾಜನಪದಗಳು ಎಂಬ ಹೆಸರಿನಿಂದ ಪುರಾತನ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿದೆ.
[ಬದಲಾಯಿಸಿ] ಮಹಾ ಜನಪದಗಳು ಕ್ರಿ.ಪೂ ೭೦೦-೩೨೧
ಕಬ್ಬಿಣದ ಯುಗದ ಕಾಲದಲ್ಲಿ ಭಾರತೀಯ ಉಪಖಂಡದಲ್ಲಿ ಅನೇಕ ಸಣ್ಣಪುಟ್ಟ ರಾಜ್ಯಗಳು, ಸಂಸ್ಥಾನಗಳು ಹರಡಿಕೊಂಡಿದ್ದವು. ಸುಮಾರು ಕ್ರಿಪೂ. ೧೦೦೦ರಷ್ಟು ಹಿಂದಿನ ವೇದಕಾಲೀಯ ಸಾಹಿತ್ಯಗಳಲ್ಲಿಯೂ ಇವುಗಳ ಉಲ್ಲೇಖವಿದೆ. ಕ್ರಿ.ಪೂ ೫೦೦ರ ಸುಮಾರಿಗೆ, ಮಹಾಜನಪದಗಳೆಂದು ಕರೆಯಲಾಗುವ ಹದಿನಾರು ರಾಜ್ಯಗಳು ಮತ್ತು ‘ಗಣರಾಜ್ಯಗಳು’ ಅಫ್ಘಾನಿಸ್ತಾನದಿಂದ ಬಾಂಗ್ಲಾದೇಶದವರೆಗಿನ , ಗಂಗಾನದಿಯ ತಪ್ಪಲು ಪ್ರದೇಶವನ್ನೊಳಗೊಂಡಂತೆ , ವಿಶಾಲ ಪ್ರದೇಶವನ್ನು ಆಳುತ್ತಿದ್ದವು. ವೈದಿಕ ಸಾಹಿತ್ಯದಲ್ಲಿ ಉಲ್ಲೇಖವಾಗಿರುವ ಇನ್ನೂ ಅನೇಕ ಸಣ್ಣಪುಟ್ಟ ರಾಜ್ಯಗಳು ಉಪಖಂಡದ ಇತರ ಪ್ರದೇಶಗಳಲ್ಲಿ ರಾಜ್ಯವಾಳುತ್ತಿದ್ದಿರಬೇಕು ಎಂದು ಕಾಣುತ್ತದೆ. ಮಗಧ, ಕೋಸಲ, ಕುರು ಮತ್ತು ಗಾಂಧಾರ ಇವು ಮಹಾಜನಪದಗಳಲ್ಲಿ ಅತಿ ಶಕ್ತಿಶಾಲಿ ರಾಜ್ಯಗಳಾಗಿದ್ದವು (ಸಾಕ್ಶ್ಯಾಧಾರಗಳು ಬೇಕಾಗಿವೆ)., ರಾಜನು ರಾಜ್ಯಾಧಿಕಾರವನ್ನು ಯಾವುದೇ ವಿಧಾನದಿಂದ ಗಳಿಸಿದ್ದರೂ, ವೈದಿಕ ವರ್ಗವು ಸೂಕ್ತ ವಂಶಪರಂಪರೆಯನ್ನೂ, ಧಾರ್ಮಿಕ ಅಧಿಕಾರವನ್ನೂ ಸೃಷ್ಟಿಸಿ, ಅವನಿಗೆ ದೈವಿಕ ಮೂಲವನ್ನು ಆರೋಪಿಸುತ್ತ , ರಾಜ್ಯಾಡಳಿತದ ಹಕ್ಕನ್ನು ಸಕ್ರಮವಾಗಿಸುತ್ತಿತ್ತು. ಅಂದಿನ ರಾಜಕೀಯ ವ್ಯಕ್ತಿತ್ವಗಳ ಬಗ್ಯೆ ವೇದ ಮತ್ತು ಪುರಾಣಗಳಲ್ಲಿನ ಉಲ್ಲೇಖಗಳು ಎಷ್ಡರಮಟ್ಟಿಗೆ ಪ್ರಾತಿನಿಧಿಕವಾಗಿವೆ ಎಂಬುದು ವಿವಾದಾಸ್ಪದವಾಗಿದೆ. ಉತ್ತರ ಭಾರತದ ಜನಸಾಮಾನ್ಯರ ಆಡುಭಾಷೆ ಪ್ರಾಕೃತವಾಗಿದ್ದರೆ, ವಿದ್ಯಾವಂತ ವರ್ಗ ಸಂಸ್ಕೃತವನ್ನು ಉಪಯೋಗಿಸುತ್ತಿತ್ತು. ಹಿಂದೂ ಧಾರ್ಮಿಕ ವಿಧಿವಿಧಾನಗಳು ಸಂಕೀರ್ಣವಾಗಿದ್ದು, ಅವುಗಳನ್ನು ನೆರವೇರಿಸುವುದು ಕೇವಲ ವೈದಿಕ ವರ್ಗದವರಿಗೆ ಮಾತ್ರ ಸಾಧ್ಯವಾಗಿತ್ತು.
ತತ್ತ್ವಶಾಸ್ತ್ರದ ಪ್ರಥಮಾವಸ್ಥೆ ಎಂದು ಪರಿಗಣಿಸಲಾದ ಉಪನಿಷತ್ತುಗಳ ರಚನೆಗೆ ಮೊದಲಾದದ್ದು ಇದೇ ಕಾಲದಲ್ಲಿ ಎಂದು ಊಹಿಸಲಾಗಿದೆ. ಭಾರತೀಯ ತತ್ತ್ವ ಶಾಸ್ತ್ರದ ಮೇಲೆ ಅಗಾಧ ಪರಿಣಾಮ ಬೀರಿದ ಈ ಗ್ರಂಥಗಳ ರಚನೆಯಾದ ಈ ಕಾಲದಲ್ಲಿಯೇ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳೂ ಬೆಳವಣಿಗೆಯಾಗುತ್ತಿದ್ದವು. ಪುರಾತನ ಗ್ರೀಸಿನಂತೆ, ಈ ಕಾಲವನ್ನೂ ವೈಚಾರಿಕತೆಯ ಸುವರ್ಣಯುಗ ಎಂದು ಕರೆಯಬಹುದಾಗಿದೆ. ಕ್ರಿ.ಪೂ. ೫೩೭ರಲ್ಲಿ ಗೌತಮ ಬುದ್ಧನಿಗೆ ಜ್ಞಾನೋದಯವಾಗಿ, ಬೌದ್ಧ ಧರ್ಮದ ಸ್ಥಾಪನೆಯಾಯಿತು. ಇದನ್ನು ಮೊದಮೊದಲು ವೈದಿಕ ಧರ್ಮದ ಅಂಗವೆಂದೇ ಉದ್ದೇಶಿಸಲಾಗಿತ್ತು. ಅದೇ ಸರಿಸುಮಾರಿಗೆ, ಕ್ರಿ.ಪೂ. ಆರನೆಯ ಶತಮಾನದಲ್ಲಿ ಮಹಾವೀರನು ಜೈನ ಧರ್ಮವನ್ನು ಸ್ಥಾಪಿಸಿದನು. ಈ ಎರಡೂ ಧರ್ಮಗಳ ತತ್ತ್ವಗಳು ಸರಳವಾಗಿದ್ದು , ಅವುಗಳನ್ನು ಪ್ರಾಕೃತದಲ್ಲಿ ಪ್ರಸಾರ ಮಾಡಿದ್ದರಿಂದ ಜನಸಾಮಾನ್ಯರ ಮನ್ನಣೆ ಪಡೆಯಲು ಸಾಧ್ಯವಾಯಿತು.ಜೈನ ಧರ್ಮದ ಪ್ರಭಾವ ಭೌಗೋಳಿಕವಾಗಿ ಸೀಮಿತವಾಗಿದ್ದರೂ , ಬೌದ್ಧ ಸನ್ಯಾಸಿ, ಸನ್ಯಾಸಿನಿಯರ ಪ್ರಚಾರದ ದೆಸೆಯಿಂದ , ಬೌದ್ಧ ಧರ್ಮವು ಮಧ್ಯ ಏಶಿಯಾ, ಪೂರ್ವ ಏಶಿಯಾ, ಟಿಬೆಟ್, ಶ್ರೀಲಂಕಾ ಮತ್ತು ಆಗ್ನೇಯ ಏಶಿಯಾದಷ್ಟು ದೂರದವರೆಗೂ ಹಬ್ಬಿತು. ಜೈನ ಧರ್ಮ ಮತ್ತು ಬೌದ್ಧ ಧರ್ಮ ಸ್ಥಾಪನೆಯಾದ ಈ ಕಾಲದ ಇತಿಹಾಸದ ದಾಖಲೆಗಳು ವಿರಳವಾಗಿದ್ದರೂ, ಮಹಾಜನಪದಗಳನ್ನು ಅದೇ ಕಾಲದಲ್ಲಿ ಮೆಡಿಟರೇನಿಯನ್ ಪ್ರದೇಶದಲ್ಲಿದ್ದ ಪುರಾತನ ಗ್ರೀಕ್ ರಾಜ್ಯಗಳಿಗೆ ಹೋಲಿಸಬಹುದಾಗಿದೆ. ಮಹಾಜನಪದಗಳ ಕಾಲದಲ್ಲಿ ಪ್ರಾರಂಭವಾದ ತತ್ತ್ವಶಾಸ್ತ್ರವು ಸಂಪೂರ್ಣ ಪೂರ್ವ ಜಗತ್ತಿನ ನಂಬಿಕೆ, ಶ್ರದ್ಧೆಗಳಿಗೆ ತಳಹದಿಯಾದರೆ, ಅದೇ ಕಾಲದಲ್ಲಿ ಪುರಾತನ ಗ್ರೀಸಿನಲ್ಲಿ ಉಗಮವಾದ ತತ್ತ್ವಶಾಸ್ತ್ರವು ಸಂಪೂರ್ಣ ಪಶ್ಚಿಮ ಜಗತ್ತಿನ ನಂಬಿಕೆಗಳಿಗೆ ಅಡಿಗಲ್ಲಾಯಿತು. ಪರ್ಷಿಯಾ ಮತ್ತು ಗ್ರೀಸ್ ದೇಶಗಳಿಂದ ಆಕ್ರಮಣದೊಂದಿಗೆ ಮತ್ತು ಮಗಧದಲ್ಲಿ ಸಂಪೂರ್ಣ ಭಾರತದದುದ್ದಕ್ಕೂ ಹಬ್ಬಿದ ಮಹಾಸಾಮ್ರಾಜ್ಯದ ಉದಯದೊಂದಿಗೆ , ಈ ಕಾಲದ ಸಮಾಪ್ತಿಯಾಯಿತು.
[ಬದಲಾಯಿಸಿ] ಕುರು ವಂಶ ಕ್ರಿ.ಪೂ ೧೨೦೦-೩೧೬
ಇಂದ್ರಪ್ರಸ್ಥ ರಾಜಧಾನಿಯಾಗಿದ್ದ ಕುರು ರಾಜ್ಯವು ಇಂದಿನ ಹರಿಯಾಣ ರಾಜ್ಯದಲ್ಲಿತ್ತು. ಪಾಟಲೀಪುತ್ರದಲ್ಲಿ ಮಗಧ ಸಾಮ್ರಾಜ್ಯವು ತಲೆ ಎತ್ತುವ ಮುನ್ನ , ಇಂದ್ರಪ್ರಸ್ಥವು ಬಹುಶಃ ಭಾರತದ ಅತಿ ಬಲಿಷ್ಠ ನಗರವಾಗಿರಬೇಕು.ಮಹಾಜನಪದಗಳ ಪಟ್ಟಿಯಲ್ಲಿ ಕುರು ರಾಜ್ಯವು ಪ್ರಧಾನವಾಗಿ ಕಾಣಬರುತ್ತದೆ. ಬುದ್ಧದ ಕಾಲದ ಕುರು ರಾಜ್ಯವು ಕೇವಲ ಮುನ್ನೂರು ಹರದಾರಿಯಷ್ಟೇ ವಿಶಾಲವಾಗಿದ್ದರೂ ಸಾಂಸ್ಕೃತಿಕ ಕೇಂದ್ರವಾಗಿ ಹೆಸರಾಗಿತ್ತು. ಕುರು ರಾಜ್ಯ ಮತ್ತು ಮಹಾಭಾರತದಲ್ಲಿ ಉಲ್ಲೇಖಿತವಾಗಿರುವ ಇದೇ ಹೆಸರಿನ ರಾಜವಂಶಕ್ಕೆ ಹೆಸರಿನಲ್ಲಿ ಸಾಮ್ಯವಿದೆ.
[ಬದಲಾಯಿಸಿ] ಗಾಂಧಾರ ರಾಜ್ಯ
ಗಾಂಧಾರ ರಾಜ್ಯವು ಇಂದಿನ ಉತ್ತರ ಪಾಕಿಸ್ತಾನ ಮತ್ತು ದಕ್ಷಿಣ ಅಫ್ಘಾನಿಸ್ತಾನದ ಪ್ರದೇಶದಲ್ಲಿತ್ತು. ಪೇಶಾವರ ಮತ್ತು ತಕ್ಷಶಿಲೆ ಇಲ್ಲಿಯ ಪ್ರಮುಖ ನಗರಗಳಾಗಿದ್ದವು. ಕ್ರಿ.ಪೂ. ೫೦೦ರಲ್ಲಿ ಪಾಣಿನಿಯು ಸಂಸ್ಕೃತದ ಸಮಗ್ರ ವ್ಯಾಕರಣವನ್ನು ಬರೆದದ್ದು ತಕ್ಷಶಿಲೆಯಲ್ಲಿ. ಇದು ವೈದಿಕ ಸಂಸ್ಕೃತವು ಶಾಸ್ತ್ರೀಯ ಸಂಸ್ಕೃತಕ್ಕೆ ಬದಲಾಗಲು ಕಾರಣೀಭೂತವಾಯಿತು. ಅತಿ ಪ್ರಬಲ ಮಹಾಜನಪದಗಳಲ್ಲಿ ಒಂದಾಗಿದ್ದ ಗಾಂಧಾರವು, ಕುರು ರಾಜ್ಯದವರ ಬೆಂಬಲಿಗ ರಾಜ್ಯವಾಗಿ ಮಹಾಭಾರತದಲ್ಲೂ ಉಲ್ಲೇಖಿತವಾಗಿದೆ. ೧೫೦೦ ವರ್ಷಗಳ ನಂತರ ವಿವಾದಾತ್ಮಕ ಘಜನಿ ಮಹಮೂದನ ದಂಡಯಾತ್ರೆಗಳ ಫಲವಾಗಿ ಗಾಂಧಾರದ ಹೆಸರು ಕಣ್ಮರೆಯಾಯಿತು.
[ಬದಲಾಯಿಸಿ] ಕೋಸಲ ರಾಜ್ಯ
ಇಂದಿನ ಉತ್ತರ ಪ್ರದೇಶದ ಔಧ್ ಪ್ರದೇಶದಲ್ಲಿ ರಾಜ್ಯವಾಳಿದ ಕೋಸಲ ರಾಜರ ರಾಜಧಾನಿ ಅಯೋಧ್ಯೆಯಾಗಿತ್ತು. ಕುರು, ಮಗಧ, ಮತ್ತು ಗಾಂಧಾರ ರಾಜ್ಯಗಳಂತೆಯೇ ವೇದೋತ್ತರ ಕಾಲದ ಅತಿ ಪ್ರಬಲ ರಾಜ್ಯಗಳಲ್ಲಿ ಕೋಸಲವೂ ಪರಿಗಣಿತವಾಗಿತ್ತು. ಹರ್ಯಂಕರ ಆಳ್ವಿಕೆಯ ಕಾಳದ ಮಗಧ ಸಾಮ್ರಾಜ್ಯದಿಂದ ಮತ್ತು ಅವರ ನಂತರದ ಇತರ ರಾಜ್ಯಗಳಿಂದ ಜರ್ಝರಿತವಾದ ಕೋಸಲವು ಮುಂದೆ ಇವುಗಳಲ್ಲಿ ಲೀನವಾಯಿತು. ರಾಮಾಯಣವೇ ಮುಂತಾದ ಸಂಸ್ಕೃತ ಗ್ರಂಥಗಳಲ್ಲಿ ಪ್ರಧಾನವಾಗಿ ಉಲ್ಲೇಖವಾಗಿರುವ ಕೋಸಲ ರಾಜ್ಯಕ್ಕೆ ಬುದ್ಧ ಮತ್ತು ಮಹಾವೀರರು ಭೇಟಿಯಿತ್ತಿದ್ದರು.
[ಬದಲಾಯಿಸಿ] ಅಂಗ ರಾಜ್ಯ
ಅಂಗರಾಜ್ಯವು ಇಂದಿನ ಬಿಹಾರದ ಭಾಗಲ್ಪುರ ಮತ್ತು ಮೊಂಘೀರ್ ಪ್ರದೇಶದಲ್ಲಿತ್ತು. ಪುರಾಣಗಳಲ್ಲಿ ಮಾಲಿನಿ ಎಂದು ಉಲ್ಲೇಖವಾಗಿರುವ, ಮುಂದೆ ಚಂಪಾ ಎಂದು ಹೆಸರಾದ ನಗರವು ಅವರ ರಾಜಧಾನಿಯಾಗಿತ್ತು. ಅವರ ರಾಜ್ಯವು ಒಂದು ಕಾಲದಲ್ಲಿ ಸಮುದ್ರತೀರದವರೆಗೂ ಹಬ್ಬಿರುವ ಸಾಧ್ಯತೆಗಳಿವೆ. ಚಂಪಾ ನಗರವು ವಾಣಿಜ್ಯ ಕೇಂದ್ರವೆಂದು ಖ್ಯಾತವಾಗಿ , ಇಂದಿನ ವಿಯಟ್ನಾಮಿನವರೆಗೂ ವ್ಯಾಪಾರ ಸಂಬಂಧವನ್ನು ಬೆಳೆಸಿತ್ತು.
[ಬದಲಾಯಿಸಿ] ಕಳಿಂಗ ರಾಜ್ಯ
ಮಹಾಜನಪದಗಳಲ್ಲಿ ಒಂದೆಂದು ಪರಿಗಣಿಸದೆಯೇ ಇದ್ದರೂ , ಪುರಾತನ ಭಾರತದ ಅತಿ ಮಹತ್ವದ ಘಟನೆಗಳಲ್ಲಿ ಮುಖ್ಯ ಪಾತ್ರ ವಹಿಸಿದ ರಾಜ್ಯಗಳಲ್ಲಿ ಕಳಿಂಗವೂ ಒಂದು - ಸಾಮ್ರಾಟ್ ಅಶೋಕನಿಂದ ಇವೆಲ್ಲವೂ ಪರಾಜಿತವಾದವು. ಭಾರತ ಮತ್ತು , ಮುಂದೆ ಇಂಡೋನೇಶಿಯ ಎಂದು ಹೆಸರಾದ , ದ್ವೀಪಸಮೂಹದೊಡನೆ ಸಾಂಸ್ಕೃತಿಕ ಸಂಬಂಧದ ಪ್ರಾರಂಭವಾದದ್ದು ಇಂದಿನ ಒರಿಸ್ಸಾದಲ್ಲಿದ್ದ ಕಳಿಂಗ ರಾಜ್ಯದ ಕಾಲದಿಂದ. ಈ ಸಂಬಂಧವು ಮುಂದೂ ಹಾಗೆಯೇ ಮುಂದುವರಿದುಕೊಂಡು ಬಂದಿತು.
[ಬದಲಾಯಿಸಿ] ಪರ್ಷಿಯನ್ನರ ಮತ್ತು ಗ್ರೀಕರ ದಾಳಿ
ಸುಮಾರು ಕ್ರಿ.ಪೂ.೫ನೇ ಶತಮಾನದಲ್ಲಿ ಭಾರತ ಉಪಖಂಡವನ್ನು ಅಕೀಮೆನಿಡ್ ಸಾಮ್ರಾಜ್ಯ ಮತ್ತು ಅಲೆಕ್ಸಾಂಡರ್ ನ ಸೈನ್ಯಗಳು ಮುತ್ತಿಗೆ ಹಾಕಿದವು. ಇದರಿಂದ ಭಾರತದ ರಾಜಕೀಯ ವ್ಯವಸ್ಥೆ ಮತ್ತು ರಾಜಕೀಯ ದಾರ್ಶನಿಕತೆ ಬದಲಾದವು.
[ಬದಲಾಯಿಸಿ] ಅಕೀಮೆನಿಡ್ ಸಾಮ್ರಾಜ್ಯ

ವಾಯವ್ಯ ಭಾರತವನ್ನು ಪರ್ಷಿಯಾದ ಅಕೀಮೆನಿಡ್ ಸಾಮ್ರಾಜ್ಯ ಆಳುತ್ತಿತ್ತು. ಇದನ್ನು ನಂತರ ಅಲೆಕ್ಸಾಂಡರನು ಆಕ್ರಮಿಸಿದನು. ಇಂದಿನ ಪಂಜಾಬ್, ಸಿಂಧೂ ನದಿಯ ಪ್ರದೇಶಗಳು ಅಲೆಕ್ಸಾಂಡರನ ಹತೋಟಿಗೆ ಬಂದವು. ಅಕೀಮೆನಿಡ್ ರಾಜ್ಯಭಾರ ೧೮೬ ವರ್ಷ ನಡೆಯಿತು. ಅವರು ಪರ್ಷಿಯನ್ ಭಾಷೆಯ ಅರಾಮಿಕ್ ಲಿಪಿಯನ್ನು ಬಳಸುತ್ತಿದ್ದರು.
[ಬದಲಾಯಿಸಿ] ಅಲೆಗ್ಸಾಂಡರನ ಸಾಮ್ರಾಜ್ಯ
ಹೆಲ್ಲೆನಿಸ್ಟಿಕ್ ಗ್ರೀಸ್ ಮತ್ತು ಬೌದ್ಧಧರ್ಮೀಯರ ನಡುವಣ ಸಂವಾದವು, ಅಲೆಗ್ಸಾಂಡರನು ಕ್ರಿ.ಪೂ. ೩೩೪ರಲ್ಲಿ ಏಷ್ಯಾದ ಕೆಲವು ಭಾಗಗಳನ್ನು ಮತ್ತು ಆಕೇಮೆನಿದ್ ಸಾಮ್ರಾಜ್ಯವನ್ನು ವಶಪಡಿಸಿಕೊಂಡು, ಭಾರತೀಯ ಉಪಖಂಡದ ಉತ್ತರ-ಪಶ್ಚಿಮ ಭಾಗಗಳನ್ನು ತಲುಪಿದಾಗ ನಡೆಯಿತು. ಅಲ್ಲಿ, ಅವನು ರಾಜ ಪೋರಸ್ನನ್ನು ಹೈದಸ್ಪೆಸ್(ಈಗಿನ ಪಾಕಿಸ್ತಾನದಲ್ಲಿನ ಜೀಲಮ್ ನಗರದ ಬಳಿ) ಯುದ್ಧದಲ್ಲಿ ಸೋಲಿಸಿ, ಪಂಜಾಬಿನ ಬಹುತೇಕ ಭಾಗವನ್ನು ಆಕ್ರಮಿಸಿಕೊಂಡನು. ಅದಾಗ್ಯೂ, ಅಲೆಗ್ಸಾಂಡರಿನ ಪಡೆಗಳು ಬಿಯಸ್ ನದಿಯಿಂದಾಚೆಗೆ ಹೋಗಲು ನಿರಾಕರಿಸಿತು. ಇದರ ಪರಿಣಾಮವಾಗಿ ಅಲೆಗ್ಸಾಂಡರನು ತನ್ನ ಸೇನೆಯನ್ನು ದಕ್ಷಿಣ-ಪಶ್ಚಿಮದೆಡೆಗೆ ನಡೆಸುವಂತಾಯಿತು.
[ಬದಲಾಯಿಸಿ] ಗ್ರೀಕೊ-ಬೌದ್ಧ ಕಾಲ
ಶಾಸ್ತ್ರೀಯ ಗ್ರೀಕ್ ಸಂಸ್ಕೃತಿ ಮತ್ತು ಬೌದ್ಧ ಧರ್ಮಗಳ ಸಾಂಸ್ಕೃತಿಕ ಮಿಶ್ರಣ ಈಗಿನ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ಪ್ರದೇಶದಲ್ಲಿ ಕ್ರಿ.ಪೂ.೪ ರಿಂದ ೫ನೇ ಶತಮಾನದಲ್ಲಿ ವ್ಯಾಪಿಸಿತ್ತು. ವಿಶೇಷತಃ ಮಹಾಯಾನವು ಇದರಿಂದ ಪ್ರಭಾವಗೊಂಡಿತು. ನಂತರ ಇದು ಚೀನ, ಕೊರಿಯ, ಮತ್ತು ಜಪಾನ್ ದೇಶಗಳ ವರೆಗೆ ಹಬ್ಬಿತು.
[ಬದಲಾಯಿಸಿ] ಮಗಧ ಸಾಮ್ರಾಜ್ಯ ಕ್ರಿ.ಪೂ ೬೮೪-೩೨೧
ಹದಿನಾರು ಮಹಾಜನಪದಗಳಲ್ಲಿ, ಮಗಧ ಸಾಮ್ರಾಜ್ಯವು ಹಲವಾರು ವಂಶಗಳ ಆಳ್ವಿಕೆಯಲ್ಲಿ ಬೆಳೆಯುತ್ತಾ ಹೋಯಿತು. ಭಾರತದ ಅತ್ಯಂತ ಮೇರು ಚಕ್ರವರ್ತಿಗಳಲ್ಲೊಬ್ಬನಾದ ಅಶೋಕ ಮೌರ್ಯನ ಆಳ್ವಿಕೆಯಲ್ಲಿ ಮಗಧ ಸಾಮ್ರಾಜ್ಯವು ಉತ್ತುಂಗಕ್ಕೇರಿತು. ನೆರೆಹೊರೆಯ ಎರಡು ರಾಜ್ಯಗಳನ್ನು ಸೇರಿಸಿಕೊಂಡು ಬೃಹತ್ ಶಕ್ತಿಯಾಗಿ ರೂಪುಗೊಂಡ ಮಗಧ ಸಾಮ್ರಾಜ್ಯಕ್ಕೆ ಸರಿಸಾಟಿಯಾದ ಸೇನೆಯಾವುದೂ ಇಲ್ಲವೆಂಬತಾಗಿತ್ತು.
[ಬದಲಾಯಿಸಿ] ಹರ್ಯಂಕ ರಾಜವಂಶ
ಸಂಪ್ರದಾಯದ ಪ್ರಕಾರ, ಹರ್ಯಾಂಕ ರಾಜವಂಶವು ಮಗಧ ಸಾಮ್ರಾಜ್ಯವನ್ನು ಕ್ರಿ.ಪೂ.೬೮೪ರಲ್ಲಿ ಸಂಸ್ಥಾಪಿಸದ್ದೆಂದು ಹೇಳಲಾಗುತ್ತದೆ. ಆಗ ಅದರ ರಾಜಧಾನಿಯು ರಾಜಗೃಹ, ನಂತರ ಪಾಟಲೀಪುತ್ರವಾಯಿತು (ಈಗಿನ ಪಾಟ್ನ). ಈ ರಾಜವಂಶವು ಶಿಶುನಾಗ ರಾಜವಂಶದಿಂದ ಮುಂದುವರೆಯಿತು.
[ಬದಲಾಯಿಸಿ] ಶಿಶುನಾಗ ಸಾಮ್ರಾಜ್ಯ
ಈ ಕಾಲದಲ್ಲಿ ಭಾರತದ ಎರಡು ದೊಡ್ಡ ಧರ್ಮಗಳ ಬೆಳವಣಿಗೆಯಾಯಿತು. ೬ನೇ ಶತಮಾನದಲ್ಲಿ ಬುದ್ಧನು ಬೌದ್ಧ ಧರ್ಮವನ್ನು ಕಂಡು ಹಿಡಿದನು. ಮಹಾವೀರ ಜೈನ ಧರ್ಮವನ್ನು ಕಂಡು ಹಿಡಿದನು. ಶಿಶುನಾಗ ಸಾಮ್ರಾಜ್ಯವು ಕ್ರಿ.ಪೂ. ೪೨೪ ರ ತನಕ ನಂದ ಸಾಮ್ರಾಜ್ಯದಿಂದ ಉರುಳಿತು.
[ಬದಲಾಯಿಸಿ] ನಂದ ಸಾಮ್ರಾಜ್ಯ
ಶಿಶುನಾಗ ಸಾಮ್ರಾಜ್ಯದ ರಾಜ ಮಹಾನಂದಿಯ ಅವೈಧ ಪುತ್ರನೊಬ್ಬನು ನಂದ ಸಾಮ್ರಾಜ್ಯವನ್ನು ಸ್ಥಾಪಿಸಿದನು. ನೂರುವರ್ಷ ಬಾಳಿದ ಈ ಸಾಮ್ರಾಜ್ಯ ದ ಬಹುತೇಕ ಅವಧಿಯನ್ನು ಆಳಿದ ಮಹಾಪದ್ಮ ನಂದನು ತನ್ನ ೮೮ನೆಯ ವಯಸ್ಸಿನಲ್ಲಿ ಮರಣ ಹೊಂದಿದನು. ನಂದ ಸಾಮ್ರಾಜ್ಯದ ನಂತರ ಮೌರ್ಯ ಸಾಮ್ರಾಜ್ಯವು ತಲೆಯೆತ್ತಿತು. ಅಲೆಗ್ಸಾಂಡರನು ಭಾರತದಿಂದ ಕಾಲ್ತೆಗೆಯಲು ನಂದ ಸಾಮ್ರಾಜ್ಯದಲ್ಲಿ ಅಗಾಧ ಸೈನ್ಯಬಲವಿದೆ ಎಂಬ ಗುಸುಗುಸು ಸುದ್ದಿಯೂ ಕಾರ ಣವಾಯಿತು ಎನ್ನಲಾಗಿದೆ.
[ಬದಲಾಯಿಸಿ] ಮೌರ್ಯ ಸಾಮ್ರಾಜ್ಯ ಕ್ರಿ.ಪೂ ೩೨೧-೧೮೪

ದೇಶಭ್ರಷ್ಟನಾದ ಸೇನಾಪತಿ ಚಂದ್ರಗುಪ್ತ ಮೌರ್ಯನು ಕ್ರಿ.ಪೂ. ೩೨೧ರಲ್ಲಿ ಆಗಿನ ರಾಜ ಧನನಂದನನ್ನು ಪದಚ್ಯುತನನ್ನಾಗಿ ಮಾಡಿ , ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಇದೇ ಕಾಲದಲ್ಲಿ ಮೊಟ್ಟಮೊದಲ ಬಾರಿಗೆ , ಭಾರತೀಯ ಉಪಖಂಡದ ಬಹುತೇಕ ಎಲ್ಲಾ ಭಾಗಗಳೂ ಒಂದೇ ಅಧಿಪತ್ಯದ ಅಧೀನವಾಗಿದ್ದವು. ಪರ್ಷಿಯನ್ ಮತ್ತು ಗ್ರೀಕ್ ಪಡೆಗಳ ದಾಳಿಯಿಂದ ಉತ್ತರ ಭಾರತ ಜರ್ಝರಿತವಾಗಿದ್ದರ ಲಾಭ ಪಡೆದುಕೊಂಡ ಚಂದ್ರಗುಪ್ತನು , ತನ್ನ ರಾಜ್ಯವನ್ನು ಭಾರತೀಯ ಉಪಖಂಡದ ವಿವಿಧ ಭಾಗಗಳಿಗೆ ವಿಸ್ತರಿಸಿದ್ದಷ್ಟೇ ಅಲ್ಲದೆ, ಗಾಂಧಾರವನ್ನೂ ಗೆದ್ದು , ಪರ್ಷಿಯಾ ಮತ್ತು ಮಧ್ಯ ಏಶಿಯಾದವರೆಗೂ ಚಾಚಿದನು. ಅವನ ಉತ್ತರಾಧಿಕಾರಿಯಾದ ಬಿಂದುಸಾರನು , ದಕ್ಷಿಣ ಮತ್ತು ಪೂರ್ವದ ತುದಿಗಳನ್ನು ಹೊರತುಪಡಿಸಿ, ತನ್ನ ಸಾಮ್ರಾಜ್ಯವನ್ನು ಭಾರತದ ಬಹುತೇಕ ಎಲ್ಲಾ ಭಾಗಗಳಿಗೂ ವಿಸ್ತರಿಸಿದನು. ಈ ಎರಡು ತುದಿಗಳ ರಾಜ್ಯಗಳೂ ಕೂಡಾ ಬಹುಶಃ ಆಶ್ರಿತ ಸ್ಥಾನದಲ್ಲಿದ್ದವು. ಬಿಂದುಸಾರನ ನಂತರ ಅವನ ಮಗ ಅಶೋಕನು ಪಟ್ಟಕ್ಕೆ ಬಂದನು. ಮೊದಮೊದಲಲ್ಲಿ ಅವನೂ ರಾಜ್ಯವಿಸ್ತಾರದಲ್ಲಿ ಮಗ್ನನಾದರೂ, ಕಳಿಂಗಯುದ್ಧದ ನರಮೇಧದ ನಂತರ , ರಕ್ತಪಾತವನ್ನು ತ್ಯಜಿಸಿ, ಬೌದ್ಧಧರ್ಮೀಯನಾಗಿ ಅಹಿಂಸಾಮಾರ್ಗದ ಅನುಯಾಯಿಯಾದನು. ಅಶೋಕನ ಶಿಲಾಶಾಸನಗಳು ಭಾರತೀಯ ಇತಿಹಾಸದ ಅತಿ ಹಳೆಯ ಕಾಪಿಟ್ಟ ದಾಖಲೆಗಳಾಗಿವೆ. ಈ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು, ಅಶೋಕನ ನಂತರದ ಸಾಮ್ರಾಜ್ಯಗಳ ಕಾಲಮಾನ ನಿರ್ಣಯ ಸಾಧ್ಯವಾಗಿದೆ. ಅಶೋಕನ ಕಾಲದಲ್ಲಿ ಮೌರ್ಯ ಸಾಮ್ರಾಜ್ಯವು ಪೂರ್ವ ಮತ್ತು ಆಗ್ನೇಯ ಏಶಿಯಾಗಳಲ್ಲಿ ಬೌದ್ಧಧರ್ಮದ ಪ್ರಸಾರಕ್ಕೆ ಕಾರಣವಾಗಿ, ಸಂಪೂರ್ಣ ಏಶಿಯಾದ ಇತಿಹಾಸ ಮತ್ತು ಬೆಳವಣಿಗೆಯಲ್ಲಿ ಮೂಲಭೂತ ಬದಲಾವಣೆಯನ್ನುಂಟುಮಾಡಿತು. ಪ್ರಪಂಚದ ಅತಿ ಶ್ರೇಷ್ಟ ರಾಜರುಗಳಲ್ಲಿ ಸಾಮ್ರಾಟ್ ಅಶೋಕನೂ ಪರಿಗಣಿತವಾಗಿದ್ದಾನೆ.
ಮೌರ್ಯ ರಾಜರುಗಳ ಆಳ್ವಿಕೆಯ ಅಂದಾಜು ಅವಧಿ | ||||||||||||
ಚಕ್ರವರ್ತಿ | ಆಳ್ವಿಕೆ ಆರಂಭ | ಆಳ್ವಿಕೆ ಅಂತ್ಯ | ||||||||||
---|---|---|---|---|---|---|---|---|---|---|---|---|
ಚಂದ್ರಗುಪ್ತ ಮೌರ್ಯ | ಕ್ರಿ.ಪೂ.೩೨೨ | ಕ್ರಿ.ಪೂ. ೨೯೮ | ||||||||||
ಬಿಂದುಸಾರ | ಕ್ರಿ.ಪೂ. ೨೯೭ | ಕ್ರಿ.ಪೂ. ೨೭೨ | ||||||||||
ಸಾಮ್ರಾಟ್ ಅಶೋಕ | ಕ್ರಿ.ಪೂ. ೨೭೩ | ಕ್ರಿ.ಪೂ. ೨೩೨ | ||||||||||
ದಶರಥ | ಕ್ರಿ.ಪೂ. ೨೩೨ | ಕ್ರಿ.ಪೂ. ೨೨೪ | ||||||||||
ಸಂಪ್ರತಿ | ಕ್ರಿ.ಪೂ. ೨೨೪ | ಕ್ರಿ.ಪೂ. ೨೧೫ | ||||||||||
ಶಾಲಿಸುಕ | ಕ್ರಿ.ಪೂ. ೨೧೫ | ಕ್ರಿ.ಪೂ. ೨೦೨ | ||||||||||
ದೇವವರ್ಮನ್ | ಕ್ರಿ.ಪೂ. ೨೦೨ | ಕ್ರಿ.ಪೂ. ೧೯೫ | ||||||||||
ಶತಧನ್ವನ್ | ಕ್ರ.ಿಪೂ. ೧೯೫ | ಕ್ರಿ.ಪೂ. ೧೮೭ | ||||||||||
ಬೃಹದ್ರಥ | ಕ್ರಿ.ಪೂ. ೧೮೭ | ಕ್ರಿ.ಪೂ ೧೮೫ |
[ಬದಲಾಯಿಸಿ] ಶುಂಗ ಸಾಮ್ರಾಜ್ಯ
ಕ್ರಿ.ಪೂ. ೧೮೫ ರಲ್ಲಿ , ಸಾಮ್ರಾಟ್ ಅಶೋಕನ ಮರಣದ ಐವತ್ತು ವರ್ಷಗಳ ನಂತರ, ಮೌರ್ಯವಂಶದ ಕೊನೆಯ ರಾಜ ಬೃಹದ್ರಥನು ತನ್ನ ಸೈನ್ಯದ ಗೌರವವನ್ನು ಸ್ವೀಕರಿಸುತ್ತಿದ್ದಾಗ, ಅವನ ಮಹಾದಂಡನಾಯಕನಾದ ಪುಷ್ಯಮಿತ್ರ ಶುಂಗನು ಅವನನ್ನು ಅಮಾನುಷವಾಗಿ ಕೊಲೆಗೈದನು. ನಂತರ ಪಟ್ಟಕ್ಕೇರಿದ ಪುಷ್ಯಮಿತ್ರನು ಶುಂಗ ಸಾಮ್ರಾಜ್ಯವನ್ನು ಸ್ಥಾಪಿಸಿದನು.
[ಬದಲಾಯಿಸಿ] ಕಣ್ವ ರಾಜ್ಯ
ಶುಂಗ ರಾಜ್ಯವನ್ನು ಸ್ಥಾನಪಲ್ಲಟ ಮಾಡಿ , ಕಣ್ವ ರಾಜವಂಶವು, ಭಾರತದ ಪೂರ್ವ ಭಾಗವನ್ನು ಕ್ರಿ.ಪೂ. ೭೧ ರಿಂದ ೨೬ ರವೆರಗೆ ಆಳಿತು. ಕ್ರಿ.ಪೂ. ೭೫ರಲ್ಲಿ ಕಣ್ವ ವಂಶದ ವಾಸುದೇವನು ಶುಂಗರ ಕೊನೆಯ ರಾಜನನ್ನು ಪದಚ್ಯುತಗೊಳಿಸಿದರೂ, ತದನಂತರದ ಶುಂಗ ರಾಜರು ತನ್ನ ರಾಜ್ಯದ ಮೂಲೆಯೊಂದರಲ್ಲಿ ರಾಜ್ಯಭಾರವನ್ನು ಮುಂದುವರಿಸಲು ಬಿಟ್ಟನು.ನಾಲ್ವರು ಕಣ್ವ ರಾಜರು ಮಗಧವನ್ನು ಆಳಿದರು. ಕ್ರಿ.ಪೂ ೩೦ ರಲ್ಲಿ ದಕ್ಷಿಣದ ರಾಜವಂಶಗಳ ದಾಳಿಯಲ್ಲಿ ಕಣ್ವ ಮತ್ತು ಶುಂಗ ಎರಡೂ ರಾಜ್ಯಗಳೂ ಕೊಚ್ಚಿ ಹೋಗಿ, ಪೂರ್ವ ಮಾಳವ ಪ್ರದೇಶವು ದಾಳಿಮಾಡಿದವರ ವಶವಾಯಿತು.ಕಣ್ವ ರಾಜ್ಯದ ಅವನತಿಯೊಂದಿಗೆ, ಮಗಧ ಸಾಮ್ರಾಜ್ಯವು ಅತಿ ಪ್ರಬಲ ಸಾಮ್ರಾಜ್ಯ ಎಂಬ ಹೆಗ್ಗಳಿಕೆಯನ್ನು ಆಂಧ್ರದ ಶಾತವಾಹನ ಸಾಮ್ರಾಜ್ಯಕ್ಕೆ ಬಿಟ್ಟುಕೊಟ್ಟಿತು.
[ಬದಲಾಯಿಸಿ] ಪ್ರಾರಂಭದ ಮಧ್ಯಯುಗೀಯ ರಾಜ್ಯಗಳು - ಸುವರ್ಣ ಕಾಲ
ಮಧ್ಯಯುಗ, ಅದರಲ್ಲೂ ಮುಖ್ಯವಾಗಿ ಗುಪ್ತ ಸಾಮ್ರಾಜ್ಯದ ಕಾಲ, ಅಭೂತಪೂರ್ವ ಸಾಂಸ್ಕೃತಿಕ ಅಭಿವೃದ್ಧಿಯ ಕಾಲವಾಗಿದ್ದು, ಈ ಅವಧಿಯನ್ನು ಭಾರತದ ಸುವರ್ಣ ಕಾಲ ಎಂದು ಕರೆಯಲಾಗಿದೆ. ಸರಿಸುಮಾರು ಕ್ರಿ.ಶ. ೧ನೆಯ ಶತಮಾನದ ಮಧ್ಯಭಾಗದಲ್ಲಿ, ಮಧ್ಯ ಏಶಿಯಾದಿಂದ ಬಂದು ಈಶಾನ್ಯ ಭಾರತವನ್ನು ಆಕ್ರಮಿಸಿದ ಕುಶಾನರು , ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಈ ಸಾಮ್ರಾಜ್ಯವು ಮುಂದೆ, ಪೇಶಾವರದಿಂದ, ಗಂಗಾನದಿಯ ಹರವಿನ ಮಧ್ಯಭಾಗದವರೆಗೆ, ಅಷ್ಟೇ ಏಕೆ, ಬಹುಶಃ ಬಂಗಾಳ ಕೊಲ್ಲಿಯವರೆಗೂ, ವಿಸ್ತರಿಸಿತು. ಪುರಾತನ ಬ್ಯಾಕ್ಟ್ರಿಯಾ (ಇಂದಿನ ಅಫಘಾನಿಸ್ತಾನದ ಉತ್ತರದಲ್ಲಿದ್ದ ಪ್ರದೇಶ) ಮತ್ತು ದಕ್ಷಿಣ ತಾಜಿಕಿಸ್ತಾನಗಳನ್ನೂ ಈ ಸಾಮ್ರಾಜ್ಯವು ಒಳಗೊಂಡಿತ್ತು. ಇವರ ಪ್ರಭಾವವು ತುರ್ಕಿಸ್ತಾನದವರೆಗೂ ಹಬ್ಬಿದ್ದು, ಚೀನಾ ದೇಶದಲ್ಲಿ ಬೌದ್ಧ ಧರ್ಮ ಪ್ರಸಾರಕ್ಕೆ ಅನುವು ಮಾಡಿಕೊಟ್ಟಿತು. ಇದೇ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿ ಅನೇಕ ರಾಜವಂಶಗಳು ತಲೆ ಎತ್ತಿದ್ದವು. ಮಧುರೆಯನ್ನು ರಾಜಧಾನಿಯಾಗಿಟ್ಟುಕೊಂಡು , ದಕ್ಷಿಣ ತಮಿಳುನಾಡಿನಲ್ಲಿ ರಾಜ್ಯಭಾರ ಮಾಡುತ್ತಿದ್ದ ಪಾಂಡ್ಯ ರಾಜ್ಯವು ಇವುಗಳಲ್ಲಿ ಮೊದಲನೆಯದು.ಪಾಂಡ್ಯ ರಾಜ್ಯದ ಕಾಲಮಾನದ ಭೂಶಾಸ್ತ್ರ ಮತ್ತು ಇತಿಹಾಸಗಳ ಒಂದು ಮುಖ್ಯ ಆಕರವೆಂದರೆ ಗ್ರೀಕ್ ಇತಿಹಾಸಜ್ಞ ಅರ್ರಿಯನ್. ಈ ಕಾಲಖಂಡವು ಮೌರ್ಯರು ಅಸ್ತಂಗತರಾಗಿ ಶಾತವಾಹನರು ಕ್ರಿ.ಪೂ.೨೦೦ರಲ್ಲಿ ಪ್ರವರ್ಧಮಾನಕ್ಕೆ ಬಂದಾಗಿನಿಂದ ಹಿಡಿದು, ಗುಪ್ತರ ಸಾಮ್ರಾಜ್ಯದ ಕೊನೆಯವರೆಗೂ, ಅಂದರೆ ಕ್ರಿ.ಶ. ಮೊದಲನೆಯ ಸಹಸ್ರಮಾನದ ಮಧ್ಯಭಾಗದವರೆಗೂ, , ಸುಮಾರು ೭೦೦ ವರ್ಷಗಳವರೆಗೆ ವ್ಯಾಪಿಸಿದ್ದು, ಹೂಣರ ಆಕ್ರಮಣದೊಂದಿಗೆ ಕೊನೆಯಾಯಿತು.
[ಬದಲಾಯಿಸಿ] ಶಾತವಾಹನ ಸಾಮ್ರಾಜ್ಯ
ಶಾತವಾಹನರು (ಇವರಿಗೆ ಆಂಧ್ರರು ಎಂದೂ ಕರೆಯಲಾಗುತ್ತದೆ) ಸುಮಾರು ಕ್ರಿ.ಪೂ. ೨೩೦ ರಿಂದ ದಕ್ಷಿಣ ಮತ್ತು ಮಧ್ಯ ಭಾರತದ ಪ್ರದೇಶದಲ್ಲಿ ಆಳಿದ ರಾಜವಂಶ. ಇವರ ರಾಜ್ಯದ ಅಂತ್ಯದ ಬಗ್ಯೆ ವಿವಾದಗಳಿದ್ದರೂ, ಅತ್ಯಂತ ಉದಾರೀ ಅಂದಾಜಿನ ಪ್ರಕಾರ, ಸುಮಾರು ೪೫೦ ವರ್ಷ ಆಡಳಿತ ನಡೆಸಿರಬೇಕು.ಇದಕ್ಕಿಂತ ಮೊದಲೇ ಅವರ ಸಾಮ್ರಾಜ್ಯವು ದಾಯವಾದಿಗಳಲ್ಲಿ ಹರಿದು ಹಂಚಿಹೋಗಿತ್ತು. ಶಕರೊಂದಿಗೆ ಕಲಹ ಮತ್ತು ಸಾಮಂತರ ರಾಜರುಗಳ ಮಹತ್ವಾಕಾಂಕ್ಷೆ ಈ ರಾಜ್ಯದ ಅವನತಿಗೆ ಕಾರಣವಾಯಿತು. ಅನೇಕ ರಾಜವಂಶಗಳು ಶಾತವಾಹನರ ರಾಜ್ಯವನ್ನು ಹಂಚಿಕೊಂಡವು.
[ಬದಲಾಯಿಸಿ] ಕುನಿಂದ ರಾಜ್ಯ
ಈ ಹಿಮಾಲಯದ ತಪ್ಪಲಿನ ರಾಜವಂಶವು, ಸಣ್ಣದಾಗಿದ್ದರೂ, ಸುಮಾರು ೫೦೦ ವರ್ಷ ರಾಜ್ಯಭಾರ ಮಾಡಿ, ಉಲ್ಲೇಖನಾರ್ಹವಾಗಿದೆ. ಆಗಿನ ಅನೇಕ ಸಣ್ಣಪುಟ್ಟ ರಾಜ್ಯಗಳಂತೆ ಇದೂ ಸಹ, ಮಹಾಜನಪದಗಳ ಸಮಕಾಲೀನ ರಾಜ್ಯಗಳ ಸಂಬಂಧಿಯಾಗಿತ್ತು. ಈ ರಾಜ್ಯವು ಕ್ರಿ.ಪೂ ೨ನೆಯ ಶತಮಾನದಿಂದ ಕ್ರಿ.ಶ. ೩ ನೆಯ ಶತಮಾನದವರೆಗೆ ಆಳಿತು.
[ಬದಲಾಯಿಸಿ] ಪಾಂಡ್ಯರು, ಚೋಳರು ಮತ್ತು ಚೇರರು
ಪಾಂಡ್ಯರು, ಚೋಳರು ಮತ್ತು ಚೇರರು ಭಾರತ ಉಪಖಂಡದ ದಕ್ಷಿಣ ತುದಿಯಲ್ಲಿ ನೆಲೆಯೂರಿದ್ದ ಮೂರು ರಾಜ್ಯಗಳು., ಪಶ್ಚಿಮ ಮತ್ತು ಮಧ್ಯ ಏಶಿಯಾದ ಕಡೆಯ ಸತತವಾದ ದಾಳಿಗಳಿಂದ ಉತ್ತರ ಭಾರತದ ಬೃಹತ್ ಸಾಮ್ರಾಜ್ಯಗಳು ಶಿಥಿಲವಾಗುತ್ತಿದ್ದಂತೆ,ಭಾರತದ ಕಲಾ ಮತ್ತು ಸಂಸ್ಕೃತಿಯ ಕೇಂದ್ರಸ್ಥಾನವು, ಫಲವತ್ತಾದ ಇಂಡೋ-ಗಂಗಾ ಪ್ರಸ್ಥಭೂಮಿಯಿಂದ, ಈ ಮೂರು ರಾಜ್ಯಗಳತ್ತ ಸರಿಯಲು ಮೊದಲಾಯಿತು. ಮೊದಮೊದಲು ಪ್ರಬಲರಾಗಿಲ್ಲದಿದ್ದರೂ, ತಮ್ಮತಮ್ಮಲ್ಲೇ ಕಚ್ಚಾಡುತ್ತಿದ್ದರೂ, ಈ ರಾಜರುಗಳು , ಮುಂದೆ ಆಗ್ನೇಯ ಏಷ್ಯಾದಲ್ಲಿಯೂ ತಮ್ಮ ರಾಜ್ಯವನ್ನು ಸ್ಥಾಪಿಸಿದರು.
[ಬದಲಾಯಿಸಿ] ಕುಶಾನರ ಸಾಮ್ರಾಜ್ಯ
ಕುಶಾನರ ಸಾಮ್ರಾಜ್ಯವು (ಕ್ರಿ.ಶ. ೧ರಿಂದ ೩ನೆಯ ಶತಮಾನ ) ತನ್ನ ಉತ್ತುಂಗ ಸ್ಥಿತಿಯಲ್ಲಿ, ಸುಮಾರು ಕ್ರಿ.ಶ. ೧೦೫ - ೨೫೦ರ ಕಾಲದಲ್ಲಿ, ತಾಜಿಕಿಸ್ತಾನದಿಂದ ಕ್ಯಾಸ್ಪಿಯನ್ ಸಮುದ್ರ ,ಅಫ್ಘಾನಿಸ್ತಾನ ಹಾಗೂ ಗಂಗಾನದಿಯ ಕಣಿವೆಯವರೆಗೂ ಹಬ್ಬಿತ್ತು. ಈ ಸಾಮ್ರಾಜ್ಯವನ್ನು ಈಗಿನ ಚೀನಾದ ಪೂರ್ವ ತುರ್ಕಿಸ್ತಾನದ ನಿವಾಸಿಗಳಾಗಿದ್ದ ಟೋಚಾರಿಯನ್ನರು ಸ್ಥಾಪಿಸಿದರೂ, ಅವರ ಸಾಮ್ರಾಜ್ಯದ ಸಂಸ್ಕೃತಿ ಉತ್ತರಭಾರತದಿಂದ ಪ್ರಭಾವಿತವಾಗಿತ್ತು. ರೋಮ್, ಸಸಾನೀಯ ಪರ್ಷಿಯಾ ಮತ್ತು ಚೀನಾದೊಂದಿಗೆ ಸೌಹಾರ್ದ ಸಂಬಂಧವಿಟ್ಟುಕೊಂಡು , ಈ ಸಾಮ್ರಾಜ್ಯವು ಅನೇಕ ಶತಮಾನಗಳವರೆಗೆ ಪೂರ್ವ ಮತ್ತು ಪಶ್ಚಿಮ ಜಗತ್ತಿನ ಕೊಡುಕೊಳ್ಳುವಿಕೆಯ ಕೇಂದ್ರವಾಗಿದ್ದು, ಚೀನಾ ದೇಶದೊಂದಿಗಿನ ವ್ಯವಹಾರದ ಮೂಲಕ , ಅಲ್ಲಿ ಬೌದ್ಧ ಧರ್ಮ ಬೇರುಬಿಡಲು ಕಾರಣವಾಯಿತು.
[ಬದಲಾಯಿಸಿ] ಪಶ್ಚಿಮ ಕ್ಷತ್ರಪರು
ಪಶ್ಚಿಮ ಕ್ಷತ್ರಪರು ( ಅಥವಾ ಸತ್ರಪರು) , (ಕ್ರಿ.ಶ. ೩೫-೪೦೫ ) ಶಕ ವಂಶದವರಾಗಿದ್ದು ಭಾರತದ ಪಶ್ಚಿಮ ಮತ್ತು ಮಧ್ಯಭಾಗವನ್ನು ಆಳುತ್ತಿದ್ದರು ( ಸೌರಾಷ್ಟ್ರ ಮತ್ತು ಮಾಳವ : ಇಂದಿನ ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳು). ಉತ್ತರಭಾರತವನ್ನು ಆಳುತ್ತಿದ್ದ ಕುಶಾನರು ಹಾಗೂ ಮಧ್ಯಭಾರತದ ಶಾತವಾಹನರು (ಆಂಧ್ರರು) ಇವರ ಸಮಕಾಲೀನರಾಗಿದ್ದರು. ಸುಮಾರು ೩೫೦ ವರ್ಷಗಳ ಇವರ ಆಳ್ವಿಕೆಯಲ್ಲಿ ೨೭ ಸ್ವತಂತ್ರ ರಾಜರುಗಳು ಆಗಿಹೋದರು. ಕ್ಷತ್ರಪ ಶಬ್ದದ ಮೂಲ ಸತ್ರಪ ಅಥವಾ ಪರ್ಷಿಯನ್ ಕ್ಸತ್ರಪವನ್ ಆಗಿದ್ದು, ಇದರರ್ಥ ಪ್ರಾಂತ ಮುಖಂಡ ಅಥವಾ ರಾಜಪ್ರತಿನಿಧಿ ಎಂದಾಗುತ್ತದೆ.
[ಬದಲಾಯಿಸಿ] ಗುಪ್ತರ ಸಾಮ್ರಾಜ್ಯ

ಕ್ರಿ.ಶ. ೪ರಿಂದ ೫ನೆಯ ಶತಮಾನದಲ್ಲಿ , ಗುಪ್ತರ ಆಡಳಿತದಲ್ಲಿ, ಸಂಪೂರ್ಣ ಉತ್ತರಭಾರತವು ಒಂದುಗೂಡಿತು.ಸುವರ್ಣ ಯುಗವೆಂದೇ ಹೆಸರಾದ ಈ ಕಾಲದಲ್ಲಿ, ಹಿಂದೂ ಸಂಸ್ಕೃತಿ, ವಿಜ್ಞಾನ ಮತ್ತು ರಾಜನೈತಿಕ ಆಡಳಿತಗಳು ಪ್ರವರ್ಧಮಾನವಾದವು. ಆರನೆಯ ಶತಮಾನದಲ್ಲಿ ಗುಪ್ತರ ಸಾಮ್ರಾಜ್ಯದ ಪತನದೊಂದಿಗೆ, ಭಾರತ ಮತ್ತೆ ಅನೇಕ ರಾಜರುಗಳಲ್ಲಿ ಹರಿದುಹಂಚಿ ಹೋಯಿತು. ಗುಪ್ತರ ಮೂಲ ಅಸ್ಪಷ್ಟವಾಗಿದ್ದರೂ, ಚೀನಾದ ಪ್ರವಾಸಿ ಇ ತ್ಸಿಂಗನ ದಾಖಲೆಗಳಲ್ಲಿ ಮಗಧದ ಗುಪ್ತ ರಾಜ್ಯದ ಬಗ್ಯೆ ಮೊದಲ ಕರುಹುಗಳು ಕಾಣಬರುತ್ತವೆ. ಪುರಾಣಗಳು ಈ ಕಾಲದಲ್ಲಿಯೇ ಬರೆಯಲ್ಪಟ್ಟವೆಂದು ನಂಬಲಾಗಿದೆ. ಮಧ್ಯ ಏಶಿಯಾದ ಹೂಣರ ಧಾಳಿಯಿಂದ ಗುಪ್ತರ ಸಾಮ್ರಾಜ್ಯ ಪತನವಾಯಿತು. ಇದರ ನಂತರವೂ, ಗುಪ್ತ ಕುಲದ ಸೋದರಸಂಬಂಧಿ ವಂಶವೊಂದು ಮಗಧವನ್ನು ಆಳುತ್ತಿದ್ದು, ಮುಂದೆ ಗುಪ್ತ ಸಾಮ್ರಾಜ್ಯದಷ್ಟೇ ವಿಶಾಲವಾದ ರಾಜ್ಯವನ್ನು ಕಟ್ಟಿ ಆಳಿದ , ಹರ್ಷ ವರ್ಧನನಿಂದ ಸೋಲಿಸಲ್ಪಟ್ಟು ಅವನತಿ ಹೊಂದಿತು.
ಗುಪ್ತ ಸಾಮ್ರಾಜ್ಯ | ||||||||||||
ಸಾಮ್ರಾಟರು | ಆಳ್ವಿಕೆ ಆರಂಭ | ಆಳ್ವಿಕೆ ಅಂತ್ಯ | ||||||||||
---|---|---|---|---|---|---|---|---|---|---|---|---|
ಚಂದ್ರ ಗುಪ್ತ I | ೩೧೯ | ೩೩೫ | ||||||||||
ಸಮುದ್ರ ಗುಪ್ತ | ೩೩೫ | ೩೮೦ | ||||||||||
ಚಂದ್ರ ಗುಪ್ತ II | ೩೮೦ | ೪೧೫ | ||||||||||
ಕುಮಾರ ಗುಪ್ತ I | ೪೧೫ | ೪೪೫ | ||||||||||
ಸ್ಕಂದ ಗುಪ್ತ | ೪೪೫ | ೪೮೦ |
[ಬದಲಾಯಿಸಿ] ಬಿಳಿ ಹೂಣರ ಆಕ್ರಮಣ
ಬಿಳಿ ಹೂಣರು ಐದನೆಯ ಶತಮಾನದ ಮೊದಲ ಭಾಗದಲ್ಲಿ ಆಫ್ಘಾನಿಸ್ತಾನದಲ್ಲಿ ನೆಲೆಯೂರಿ ಬಾಮಿಯಾನ್ ನಲ್ಲಿ ರಾಜಧಾನಿಯನ್ನು ಸ್ಥಾಪಿಸಿದರು. ಗುಪ್ತ ಸಾಮ್ರಾಜ್ಯದ ಪತನಕ್ಕೆ ಕಾರಣವಾಗಿ ಉತ್ತರ ಭಾರತದ ಸುವರ್ಣ ಅಧ್ಯಾಯಕ್ಕೆ ನಾಂದಿ ಹಾಡಿದರು. ಆದರೆ ದಖ್ಖಣ ಮತ್ತು ದಕ್ಷಿಣ ಭಾರತದಲ್ಲಿ ಈ ಬದಲಾವಣೆಯ ಪ್ರಭಾವ ಕಾಣಿಸಲಿಲ್ಲ. ಆರನೆಯ ಶತಮಾನದ ನಂತರ ಹೂಣರ ಬಗ್ಗೆ ಬಹಳಷ್ಟು ತಿಳಿದಿಲ್ಲ. ಕೆಲವು ಚರಿತ್ರಾಕಾರರ ಪ್ರಕಾರ ಅಳಿದುಳಿದ ಹೂಣರು ಉತ್ತರ ಭಾರತದ ಜನರಲ್ಲಿ ಲೀನರಾದರು.
[ಬದಲಾಯಿಸಿ] ಕಳಭ್ರರು
ದಕ್ಷಿಣ ಭಾರತದಲ್ಲಿ ಚೋಳರು,ಚೇರರು ಮತ್ತು ಪಾಂಡ್ಯರುಗಳ ಪ್ರಾಬಲ್ಯವನ್ನು, ಕೆಲಕಾಲ ಮುರಿದು, ರಾಜ್ಯಸ್ಥಾಪನೆ ಮಾಡಿದ ಬೌದ್ಧಧರ್ಮೀಯ ಕಳಭ್ರರು, ದಕ್ಷಿಣ ಭಾರತವನ್ನು ಆಳಿದ ಏಕಮೇವ ಬೌದ್ಧ ರಾಜವಂಶ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. ಕ್ರಿ.ಶ. ೩ ನೆಯ ಮತ್ತು ೬ನೆಯ ಶತಮಾನದ ನಡುವಿನ ಕಾಲದಲ್ಲಿ ಸಂಪೂರ್ಣ ದಕ್ಷಿಣ ಭಾರತವನ್ನು ಒಗ್ಗೂಡಿಸುವುದರಲ್ಲಿ ಕಳಭ್ರರು ಯಶಸ್ವಿಯಾದರು.
[ಬದಲಾಯಿಸಿ] ವಾಯವ್ಯದ ಸಮ್ಮಿಶ್ರ ಸಂಸ್ಕೃತಿಗಳು
ಈಗಿನ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಪ್ರದೇಶಗಳಲ್ಲಿ ಪರ್ಷಿಯನ್ ಮತ್ತು ಗ್ರೀಕ್ ಆಕ್ರಮಣಕಾರರು ಮತ್ತಿ ಮಧ್ಯ ಏಷ್ಯಾದಿಂದ ಬಂದ ಅಲೆಮಾರಿ ಜನರಿಂದ ಸಮ್ಮಿಶ್ರ ಸಂಸ್ಕೃತಿಗಳು ಹುಟ್ಟಿಕೊಂಡವು. ಈ ಜನರು ರೇಷ್ಮೆ ವ್ಯಾಪಾರದ ಹಾದಿಯಲ್ಲಿ ಬೆಳೆದು ಭಾರತದ ಪ್ರಗತಿ ಪ್ರಪಂಚಾದ್ಯಂತ ಹರಡಲು ಕಾರಣರಾದರು. ಇವರ ರಾಜರು ಬೌದ್ಧ ಧರ್ಮ ಮತ್ತು ಹಿಂದೂ ಧರ್ಮವನ್ನು ಪಾಲಿಸಿ ಉತ್ತರ ಭಾರತದ ಸಂಸ್ಕೃತಿಯ ಮೇಲೆ ಬಹಳಷ್ಟು ಪ್ರಭಾವ ಮಾಡಿದರು.
[ಬದಲಾಯಿಸಿ] ಇಂಡೊ-ಗ್ರೀಕ್ ಸಾಮ್ರಾಜ್ಯ
ಈ ಸಾಮ್ರಾಜ್ಯವು ವಾಯವ್ಯ ಮತ್ತು ಉತ್ತರ ಭಾರತವನ್ನು ಕ್ರಿ.ಪೂ. ೧೮೦ ರಿಂದ ಕ್ರಿ.ಪೂ. ೧೦ ರ ತನಕ ಮೂವತ್ತಕ್ಕಿಂತ ಹೆಚ್ಚು ಗ್ರೀಕ್ ರಾಜರುಗಳಿಂದ ಆಳಿತು. ಗ್ರೀಕೊ-ಬ್ಯಾಕ್ಟ್ರಿಯನ್ ರಾಜನಾದ ಡಿಮೆಟ್ರಿಯಸ್ ಭಾರತವನ್ನು ಕ್ರಿ. ಪೂ. ೧೮೦ ರ ಕಾಲದಲ್ಲಿ ಆಕ್ರಮಣ ಮಾಡಿ ಇಂದಿನ ಉತ್ತರ ಅಫ್ಘಾನಿಸ್ತಾನದ ಪ್ರದೇಶದಲ್ಲಿ ಈ ಸಾಮ್ರಾಜ್ಯವನ್ನು ಸ್ಥಾಪಿಸಿದನು.
[ಬದಲಾಯಿಸಿ] ಇಂಡೊ-ಸ್ಕೈಥಿಯನ್ನರು
ಇವರು ಇಂಡೊ-ಯೂರೋಪಿಯನ್ ಶಕರ ಗುಂಪಿಗೆ ಸೇರಿದವರಾಗಿದ್ದಾರೆ. ಇವರು ಮೂಲತಃ ಸೈಬೀರಿಯಾ ಪ್ರದೇಶದಿಂದ ಬ್ಯಾಕ್ಟ್ರಿಯಾ, ಕಾಶ್ಮೀರ, ಕೊನೆಗೆ ಭಾರತಕ್ಕೆ ವಲಸೆ ಬಂದರು. ಇವರು ಇಂಡೊ-ಗ್ರೀಕರನ್ನು ಹೊರದಬ್ಬಿ ಗಾಂಧಾರದಿಂದ ಮಥುರಾವರೆಗೆ ರಾಜ್ಯಭಾರ ಮಾಡಿದರು.
[ಬದಲಾಯಿಸಿ] ಇಂಡೊ-ಪಾರ್ತಿಯನ್ನರು
ಕ್ರಿ.ಶ. ೧ನೇ ಶತಮಾನದ ಅವಧಿಯಲ್ಲಿ ಪಾರ್ಥಿಯನ್ನರ ನಾಯಕನಾದ ಗೊಂಡೊಫೆರಿಸ್ ಇಂದಿನ ಅಫ್ಘಾನಿಸ್ತಾನ, ಪಾಕಿಸ್ತಾನ, ಮತ್ತು ಉತ್ತರ ಭಾರತದ ಪ್ರದೇಶದಲ್ಲಿ ಆಳ್ವಿಕೆ ನಡೆಸಿದನು. ಇವರ ಭಾರತೀಯ ಹೆಸರು ಪಲ್ಲವರು ಎಂದು.
[ಬದಲಾಯಿಸಿ] ಇಂಡೊ-ಸಸ್ಸಾನಿಯರು
ಗುಪ್ತ ಸಾಮ್ರಾಜ್ಯದ ಕಾಲದಲ್ಲಿ ಪರ್ಷಿಯಾದ ಸಸ್ಸಾನಿಯರು ವಾಯವ್ಯ ಭಾರತದತ್ತ ದಂಡೆತ್ತಿ ಆಳ್ವಿಕೆ ನಡೆಸಿದರು. ಭಾರತೀಯ ಮತ್ತು ಪರ್ಷಿಯನ್ ಸಂಸ್ಕೃತಿಯ ಮಿಶ್ರಣವಾಗಿ ಇಂಡೊ-ಸಸ್ಸಾನಿಯ ಸಂಸ್ಕೃತಿ ಜನ್ಮ ತಾಳಿ ಪಂಜಾಬ್ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿ ನೆಲೆಯೂರಿದರು.
[ಬದಲಾಯಿಸಿ] ಮಧ್ಯ ಯುಗದ ಅಂಚಿನ ಸಾಮ್ರಾಜ್ಯಗಳು
ಮಧ್ಯಯುಗದ ನಂತರದ ಭಾಗದಲ್ಲಿ ಉತ್ತರ ತಮಿಳುನಾಡು ವಿನಲ್ಲಿ ಚೋಳ ಮತ್ತು ಕೇರಳ ದಲ್ಲಿ ಚೇರ ಸಾಮ್ರಾಜ್ಯಗಳು ಹುಟ್ಟಿದವು. ದಕ್ಷಿಣಭಾರತದ ಬಂದರುಗಳು ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಪಶ್ಚಿಮದ ರೋಮನ್ ಸಾಮ್ರಾಜ್ಯ ದಿಂದ ಪೂರ್ವದ ಆಗ್ನೇಯ ಏಷ್ಯಾ ತನಕ ಮುಖ್ಯವಾಗಿ ಮಸಾಲೆ ವ್ಯಾಪಾರದಲ್ಲಿ ಪಾತ್ರ ವಹಿಸಿದವು. ಉತ್ತರ ಭಾರತದಲ್ಲಿ ರಜಪೂತರು ನೆಲೆಯೂರಿ ಬ್ರಿಟಿಷರಿಂದ ಭಾರತ ಸ್ವತಂತ್ರವಗುವವರೆಗೂ ಈ ಪ್ರದೇಶವನ್ನು ಒಂದಲ್ಲ ಒಂದು ರೀತಿಯಲ್ಲಿ ಆಳಿದರು. ಈ ಕಾಲದಲ್ಲಿ ಭಾರತದ ಕಲೆ ಬೆಳೆಯಿತು. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಭಾರತದಲ್ಲಿ ಮುಖ್ಯವಾಗಿದ್ದವು. ಈ ಕಾಲವು ಉತ್ತರದಲ್ಲಿ ಹರ್ಷವರ್ಧನನ ೭ನೇ ಶತಮಾನದ ಆಕ್ರಮಣಗಳಿಂದ ಆರಂಭವಾಗಿ ಮತ್ತು ದಕ್ಷಿಣದಲ್ಲಿ ವಿಜಯನಗರ ಸಾಮ್ರಾಜ್ಯದ ಪತನದೊಂದಿಗೆ ಮುಕ್ತಾಯವಾಗುತ್ತದೆ.
[ಬದಲಾಯಿಸಿ] ಹರ್ಷನ ಸಾಮ್ರಾಜ್ಯ
ಗುಪ್ತ ಸಾಮ್ರಾಜ್ಯದ ಪತನವಾದ ನಂತರ, ಕನೋಜದ ರಾಜ ಹರ್ಷನು 7ನೆಯ ಶತಮಾನದಲ್ಲಿ ಸಂಪೂರ್ಣ ಉತ್ತರ ಭಾರತವನ್ನು ಮತ್ತೆ ಒಗ್ಗೂಡಿಸುವುದರಲ್ಲಿ ಯಶಸ್ವಿಯಾದನು. ಅವನ ಮರಣದ ನಂತರ ಅವನ ಸಾಮ್ರಾಜ್ಯವು ಅವನತಿ ಹೊಂದಿತು. 7ನೆಯ ಶತಮಾನದಿಂದ 9ನೆಯ ಶತಮಾನದವರೆಗೆ ಮೂರು ರಾಜವಂಶಗಳು ಉತ್ತರ ಭಾರತದ ನಿಯಂತ್ರಣಕ್ಕೆ ಪೈಪೋಟಿ ನಡೆಸಿದವು. ಅವು ಮಾಳವದ (ಮುಂದೆ ಕನೋಜಿನ)ಪ್ರತಿಹಾರರು, ಬಂಗಾಳದ ಪಾಲರು ಮತ್ತು ದಖ್ಖನಿಯ ರಾಷ್ಟ್ರಕೂಟರು.
[ಬದಲಾಯಿಸಿ] ಚಾಲುಕ್ಯರು ಮತ್ತು ಪಲ್ಲವರು
ಕ್ರಿ.ಶ. ೬ನೆಯ ಶತಮಾನದಲ್ಲಿ ಕಳಿಂಗ ಅಥವಾ ಒರಿಸ್ಸಾದ ಸಮೀಪದ ಪ್ರದೇಶಗಳಲ್ಲಿ ರಾಜ್ಯಭಾರ ಮಾಡಿಕೊಂಡಿದ್ದ ವಿಷ್ಣುಕುಂಡಿನ ಸಾಮ್ರಾಜ್ಯವು ಮುಂದೆ ಚಾಲುಕ್ಯರ ಸಾಮ್ರಾಜ್ಯದ ಭಾಗವಾಯಿತು. ಚಾಲುಕ್ರ ಸಾಮ್ರಾಜ್ಯವು ಕ್ರಿ.ಶ. ೫೫೦ ರಿಂದ ೭೫೦ ರವರೆಗೆ ಕರ್ನಾಟಕದ ಬಾದಾಮಿಯಿಂದಲೂ, ಮುಂದೆ ೯೭೦ರಿಂದ ೧೧೯೦ರವರೆಗೆ ಕರ್ನಾಟಕದ ಕಲ್ಯಾಣಿಯಿಂದಲೂ, ದಕ್ಷಿಣ ಮತ್ತು ಮಧ್ಯಭಾರತದಲ್ಲಿ ಹಬ್ಬಿದ್ದ ರಾಜ್ಯವನ್ನು ಆಳಿತು. ಕಾಂಚಿಯ ಪಲ್ಲವರು ಅವರ ಸಮಕಾಲೀನರಾಗಿದ್ದರು. ಮುಂದೆ ಸುಮಾರು ಒಂದು ಶತಮಾನದವರೆಗೆ ಪರಸ್ಪರ ಕಿರು ಯುದ್ಧಗಳನ್ನು ಹೂಡಿದ ಈ ಎರಡು ರಾಜ್ಯಗಳು ಅನೇಕ ಬಾರಿ ಪರಸ್ಪರರ ರಾಜಧಾನಿಗಳನ್ನು ಕೈವಶ ಮಾಡಿಕೊಂಡದ್ದೂ ಉಂಟು.ಈ ಯುದ್ಧಗಳಲ್ಲಿ ಶ್ರೀಲಂಕಾದ ರಾಜರು ಮತ್ತು ಕೇರಳದ ಚೇರರು ಪಲ್ಲವರನ್ನು ಬೆಂಬಲಿಸಿದರೆ, ಪಾಂಡ್ಯರ ಬೆಂಬಲ ಚಾಲುಕ್ಯರ ಕಡೆಗಿತ್ತು. ಸಂಪೂರ್ಣ ಭಾರತದುದ್ದಕ್ಕೂ ಏಕಮೇವ ರಾಜ್ಯದ ಪರಿಕಲ್ಪನೆ , ಉತ್ತರಭಾರತದಲ್ಲಿ ಹರ್ಷವರ್ಧನನ ಸೋಲಿನೊಡನೆ ಕುಸಿದುಬಿದ್ದರೂ, ದಕ್ಷಿಣದಲ್ಲಿ ಅದು ಚಿಗುರೊಡೆಯುತ್ತಿತ್ತು. ದಕ್ಷಿಣ ಭಾರತದ ಕಲ್ಲಿನಲ್ಲಿ ಕಡೆದ ಹಾಗೂ ಕಟ್ಟಿದ ಅತ್ಯದ್ಭುತ ದೇವಾಲಯಗಳಲ್ಲಿ ಕೆಲವು ಈ ಎರಡು ಸಾಮ್ರಾಜ್ಯದ ಕಾಲದಲ್ಲಿ ಕಟ್ಟಲ್ಪಟ್ಟವು.
[ಬದಲಾಯಿಸಿ] ಚೋಳ ಸಾಮ್ರಾಜ್ಯ
ಚೋಳ ಸಾಮ್ರಾಜ್ಯ ದಕ್ಷಿಣದಲ್ಲಿ ೯-೧೨ನೇ ಶತಮಾನಗಳಲ್ಲಿ ಪ್ರಮುಖ ಸಾಮ್ರಾಜ್ಯವಾಗಿ ಹೊಮ್ಮಿತು. ಮುಂಚಿನ ಮತ್ತು ನಂತರದ ಸಾಮ್ರಾಜ್ಯಗಳ ರೀತಿ ಇವರೂ ಕೂಡ ಭಾರತದ ಪ್ರಖ್ಯಾತ ಸ್ಮಾರಕಗಳನ್ನು ನಿರ್ಮಿಸಿದರು. ಭಾರತದ ದಕ್ಷಿಣ ತುದುಯಲ್ಲಿ ನೆಲೆಸಿದ್ದ ಕಾರಣ ಇವರು ಶ್ರೀಲಂಕಾವನ್ನು ಆಳಿದರು ಮತ್ತು ಆಗ್ನೇಯ ಏಷ್ಯಾದ ಸಂಸ್ಕೃತಿಯನ್ನು ಬಹಳಷ್ಟು ಪ್ರಭಾವಗೊಳಿಸಿದರು. ಇವರ ನೌಕಾಪಡೆಯು ಆಗಿನ ಕಾಲದಲ್ಲಿ ಅತ್ಯಂತ ಬಲಿಷ್ಠವಾಗಿದ್ದ ಕಾರಣ ಶ್ರೀಲಂಕಾ ಮತ್ತು ಬಂಗಾಳ ಕೊಲ್ಲಿಯ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದ್ದರು. ರಾಜರಾಜ ಚೋಳನನ್ನು ಭಾರತದ ಸರ್ವೋತ್ತಮ ಸಾಮ್ರಾಟರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ.
[ಬದಲಾಯಿಸಿ] ಪ್ರತಿಹಾರರು, ಪಾಲರು ಮತ್ತು ರಾಷ್ಟ್ರಕೂಟರು
ಪ್ರತಿಹಾರರು (ಇವರಿಗೆ ಗುರ್ಜರ ಪ್ರತಿಹಾರರು ಎಂದೂ ಹೆಸರಿದೆ) ಆರನೆಯ ಶತಮಾನದಿಂದ ಹನ್ನೊಂದನೆಯ ಶತಮಾನದವರೆಗೆ ಇಂದಿನ ರಾಜಸ್ಥಾನ ಮತ್ತು ಉತ್ತರ ಭಾರತದ ಪ್ರದೇಶಗಳಲ್ಲಿ ರಾಜ್ಯವಾಳಿದರು. ಪಾಲರ ಸಾಮ್ರಾಜ್ಯವು ಬಿಹಾರ ಮತ್ತು ಬಂಗಾಳಗಳಲ್ಲಿ ಹಬ್ಬಿದ್ದು ೮ರಿಂದ ೧೨ನೆಯ ಶತಮಾನದವರೆಗೆ ಅಸ್ತಿತ್ವದಲ್ಲಿತ್ತು. ಕರ್ನಾಟಕದ ಮಳಖೇಡದ ರಾಷ್ಟ್ರಕೂಟರು ಚಾಲುಕ್ಯರ ನಂತರ ಪ್ರಬಲರಾಗಿ, ೮ರಿಂದ ೧೦ನೆಯ ಶತಮಾನದವರೆಗ ದಖ್ಖನಿ ಪ್ರದೇಶದಲ್ಲಿ ರಾಜ್ಯವಾಳಿದರು.ಈ ಮೂರೂ ರಾಜ್ಯಗಳೂ ಉತ್ತರಭಾರತದ ಪ್ರದೇಶಗಳ ಮೇಲೆ ನಿಯಂತ್ರಣಕ್ಕಾಗಿ ತಮ್ಮತಮ್ಮಲ್ಲಿಯೇ ಹೊಡೆದಾಡುತ್ತಿದ್ದ ಕಾಲದಲ್ಲಿಯೇ , ದಕ್ಷಿಣದಲ್ಲಿ ಚೋಳರ ಸಾಮ್ರಾಜ್ಯವು ವಿಜೃಂಭಿಸುತ್ತಿತ್ತು. ಪಾಲ ರಾಜ್ಯವು ಮುಂದೆ ಸೇನ ಸಾಮ್ರಾಜ್ಯದ ಪಾಲಾದರೆ, ಪ್ರತಿಹಾರರ ಸಾಮ್ರಾಜ್ಯವು ವಿವಿಧ ರಜಪೂತ ರಾಜ್ಯಗಳಾಗಿ ಹೋಳಾಯಿತು.
[ಬದಲಾಯಿಸಿ] ರಜಪೂತರು
ದಾಖಲೆಗಳ ಪ್ರಕಾರ ,ರಜಪೂತರ ರಾಜ್ಯ ಸ್ಥಾಪನೆ ಆರನೆಯ ಶತಮಾನದಲ್ಲಿ ರಾಜಸ್ಥಾನದಲ್ಲಿ ಆಯಿತು. ರಜಪೂತ ರಾಜರುಗಳು, ಮೇವಾರ (ಸಿಸೋದಿಯ), ಗುಜರಾತ್ (ಸೋಲಂಕಿ), ಮಾಳವ (ಪರಮಾರರು) , ಬುಂದೇಲಖಂಡ (ಚಾಂಡೇಲರು) ಮತ್ತು ಹರಿಯಾಣ (ತೋಮರರು), ಸೇರಿದಂತೆ ಉತ್ತರಭಾರತದ , ಬಹುತೇಕ ಎಲ್ಲ ಪ್ರದೇಶಗಳನ್ನೂ ತಮ್ಮ ಅಧೀನಕ್ಕೆ ಒಳಪಡಿಸಿದ್ದರು. ಕಾಂಚೀಪುರ ರಾಜಧಾನಿಯಾಗಿದ್ದ ಪಲ್ಲವರು ಭಾರತದ ಆಗ್ನೇಯಭಾಗದಲ್ಲಿ ಕ್ರಿ.ಶ. ನಾಲ್ಕರಿಂದ ಒಂಭತ್ತನೆಯ ಶತಮಾನದವರೆಗೆ ಆಳಿದರು. ರಜಪೂತರಿಗಿಂತ ಮೊದಲು ಉತ್ತರಭಾರತವು ಪ್ರತೀಹಾರರ ಅಧೀನದಲ್ಲಿತ್ತು. ಸೇನರು, ಪಾಲರು ಇತ್ಯಾದಿ ಅನೇಕ ರಾಜವಂಶಗಳು ದೇಶದ ವಿವಿಧ ಭಾಗಗಳಲ್ಲಿ ರಾಜ್ಯಗಳನ್ನು ಕಟ್ಟಿ ರಾಜ್ಯಭಾರ ಮಾಡಿದರು. ಉತ್ತರ ಭಾರತದ ತಮ್ಮ ರಾಜ್ಯಗಳ ಆಯಕಟ್ಟಿನ ಸ್ಥಾನದ ಕಾರಣ, ರಜಪೂತ ರಾಜರುಗಳು, ಭಾರತಕ್ಕೆ ನುಗ್ಗುತ್ತಿದ್ದ ಮುಸ್ಲಿಮ್ ಸುಲ್ತಾನರುಗಳ ದಾಳಿಯನ್ನು ಸತತವಾಗಿ ಎದುರಿಸಬೇಕಾಗಿ ಬಂದು, ಬಹಳ ಕಾಲದವರೆಗೆ ಅವರನ್ನು ಹಿಮ್ಮೆಟ್ಟಿಸಿ ತಮ್ಮ ರಾಜ್ಯಗಳನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು. ಚೌಹಾಣ ವಂಶದ ರಜಪೂತ ರಾಜ ಪೃಥ್ವೀರಾಜ ಚೌಹಾಣನು ಈ ಬಗ್ಯೆ ಹೆಸರಾಗಿದ್ದಾನೆ.
[ಬದಲಾಯಿಸಿ] ಹೊಯ್ಸಳ, ಕಾಕತೀಯ, ದಕ್ಷಿಣ ಕಳಚೂರ್ಯ ಮತ್ತು ಸೇವುಣ ರಾಜ್ಯಗಳು
ಹನ್ನೆರಡನೆಯ ಶತಮಾನದ ಸುಮಾರು ಮಧ್ಯಭಾಗದಲ್ಲಿ ಕಲ್ಯಾಣಿ ಚಾಲುಕ್ಯರ ಅವನತಿಯೊಂದಿಗೆ, ಅವರ ರಾಜ್ಯವು, ಅವರ ಸಾಮಂತರಾಗಿದ್ದ ಹಳೇಬೀಡಿನ ಹೊಯ್ಸಳರು, ವಾರಂಗಲ್ಲಿನ ಕಾಕತೀಯರು, ದೇವಗಿರಿಯ ಸೇವುಣರು ಮತ್ತು ಕಳಚೂರ್ಯರ ದಕ್ಷಿಣ ಶಾಖೆ, ಇವರುಗಳ ರಾಜ್ಯಗಳಲ್ಲಿ ಹಂಚಿಹೋಯಿತು. ೧೪ನೆಯ ಶತಮಾನದ ಮೊದಲಭಾಗದಲ್ಲಿ , ದೆಹಲಿಯ ಸುಲ್ತಾನರುಗಳ ದಕ್ಷಿಣದ ದಂಡಯಾತ್ರೆಗಳು ಪ್ರಾರಂಭವಾಗಿ ಹಾಳುಗೆಡವುವವರೆಗೆ, ಸ್ಥಳೀಯ ಭಾಷೆಯಲ್ಲಿ ಸಾಹಿತ್ಯ ಮತ್ತು ವಾಸ್ತುಶಿಲ್ಪಗಳು ಪ್ರವರ್ಧಮಾನಕ್ಕೆ ಬಂದವು. ಕ್ರಿ.ಶ. ೧೩೪೩ರವರೆಗೆ ಈ ಎಲ್ಲಾ ರಾಜ್ಯಗಳ ಅವಸಾನವಾಗಿದ್ದು, ಹೊಯ್ಸಳ ಮತ್ತು ಕಾಕತೀಯರ ಆಳ್ವಿಕೆಯ ಪ್ರದೇಶಗಳಲ್ಲಿ ವಿಜಯನಗರ ಸಾಮ್ರಾಜ್ಯವು ತಲೆ ಎತ್ತಿತು.
[ಬದಲಾಯಿಸಿ] ಶಾಹಿ ರಾಜ್ಯ
ಏಳನೆಯ ಶತಮಾನದ ಮಧ್ಯಭಾಗದಿಂದ ಹನ್ನೊಂದನೆಯ ಶತಮಾನದ ಮೊದಲಿನವರೆಗೆ ಆಳಿದ ಶಾಹಿ ರಾಜ್ಯವು ಈಗಿನ ಅಫ್ಘಾನಿಸ್ತಾನದ ಪೂರ್ವ ಭಾಗ, ಪಾಕಿಸ್ತಾನದ ಉತ್ತರ ಭಾಗ ಮತ್ತು ಕಾಶ್ಮೀರವನ್ನು ಒಳಗೊಂಡಿತ್ತು. ಅವರ ರಾಜ್ಯಕಾಲವನ್ನು ಬೌದ್ಧ ತುರ್ಕ ಶಾಹಿ ಮತ್ತು ಹಿಂದೂ ಶಾಹಿ ಎಂದು ವಿಭಜಿಸಲಾಗಿದೆ. ಈ ಬದಲಾವಣೆಯು ಕ್ರಿ.ಶ.870ರ ಸುಮಾರಿಗೆ ಆಗಿರಬೇಕು. ಗಾಂಧಾರ ಅಥವಾ ಅಫ್ಘಾನಿಸ್ತಾನವನ್ನು ಆಳಿದ ಕೊನೆಯ ಬೌದ್ಧ ಅಥವಾ ಹಿಂದೂ ವಂಶ ಇದಾಗಿದ್ದು, ಇದರ ನಂತರ ಈ ಪ್ರದೇಶವು ಘಜ್ನವಿ ಮತ್ತಿತರ ಸುಲ್ತಾನೀ ಆಕ್ರಮಣಕಾರರ ಅಧೀನವಾಯಿತು
[ಬದಲಾಯಿಸಿ] ವಿಜಯನಗರ ಸಾಮ್ರಾಜ್ಯ ಕ್ರಿ.ಶ ೧೩೩೬-೧೫೬೫
ಹರಿಹರ (ಹಕ್ಕ) ಮತ್ತು ಬುಕ್ಕ ಸಹೋದರರು ವಿಜಯನಗರ ಸಾಮ್ರಾಜ್ಯವನ್ನು ೧೩೩೬ರಲ್ಲಿ ವಿಜಯನಗರ ವನ್ನು ರಾಜಧಾನಿಯಾಗಿ ಸ್ಥಾಪಿಸಿದರು. ಈ ವಿಜಯನಗರವು ಈಗಿನ ಕಾಲದ ಕರ್ನಾಟಕ ದ ಹಂಪೆ. ಕೃಷ್ಣದೇವರಾಯನ ಆಳ್ವಿಕೆಯಲ್ಲಿ ಈ ಸಾಮ್ರಾಜ್ಯದ ವೈಭವ ಉತ್ತುಂಗ ಸ್ಥಿತಿ ಮುಟ್ಟಿತು. ೧೫೬೫ರ ಯುದ್ಧದಲ್ಲಿ ತೀವ್ರ ಪರಾಭವಗೊಂಡರೂ, ಸಣ್ಣ ಪ್ರಮಾಣದಲ್ಲಿ ಇನ್ನೂ ಒಂದು ಶತಮಾನದ ವರೆಗೂ ಮುಂದುವರೆಯಿತು. ಆಗಿನ ಕಾಲದ ದಕ್ಷಿಣ ಭಾರತದ ರಾಜ್ಯಗಳು, ಇಂಡೋನೇಶಿಯದವರೆಗೂ , ತಮ್ಮಪ್ರಭಾವ ಬೀರಿ , ಆಗ್ನೇಯ ಏಶಿಯಾದ ಸಾಗರದಾಚೆಯ ವಿಶಾಲ ಪ್ರದೇಶಗಳನ್ನು ತಮ್ಮ ಅಂಕೆಯಲ್ಲಿಟ್ಟುಕೊಂಡಿದ್ದರು. ಮುಂದೆ ಈ ಹಿಂದೂ ಅರಸೊತ್ತಿಗೆಗೂ, ಮುಸ್ಲಿಮ್ ಬಹಮನಿ ಸುಲ್ತಾನರಿಗೂ ಚಕಮಕಿ ಪ್ರಾರಂಭವಾಯಿತು. ಇದರ ಪರಿಣಾಮವಾಗಿ, ಅಲ್ಲಿಯವರೆಗೂ, ಪ್ರತ್ಯೇಕವಾಗಿದ್ದ ಹಿಂದೂ , ಮುಸ್ಲಿಮ್ ಸಂಸ್ಕೃತಿಗಳು ಪರಸ್ಪರರ ಸಂಪರ್ಕಕ್ಕೆ ಬಂದು, ಪ್ರಭಾವಿತವಾದವು. ಈ ಪ್ರಭಾವ ಬಹಳ ಕಾಲ ಉಳಿಯಿತು. ಈ ಸಾಮ್ರಾಜ್ಯವು ಕಲೆ, ಶಿಲ್ಪಕಲೆ ಮತ್ತು ಕನ್ನಡ , ತೆಲುಗು ಹಾಗೂ ಸಂಸ್ಕೃತ ಸಾಹಿತ್ಯಗಳ ಅಭಿವೃದ್ಧಿಗೆ ಅಗಾಧ ಕೊಡುಗೆ ನೀಡಿತು. ಹಂಪೆಯಲ್ಲಿ ಕಾಣಸಿಗುವ ಸಮೃದ್ಧ ಅವಶೇಷಗಳು ಇದಕ್ಕೆ ಸಾಕ್ಷಿಯಾಗಿವೆ.
ವಿಜಯನಗರ ಸಾಮ್ರಾಜ್ಯವು ಅಂತಿಮವಾಗಿ ಪತನವಾಗಲು ಕಾರಣ ಉತ್ತರದಲ್ಲಿ ಅಡಿಯೂರುತ್ತಿದ್ದ ದೆಹಲಿ ಸುಲ್ತಾನರು. ಇವರು ರಜಪೂತರ ಸ್ಥಾನವಾದ ದೆಹಲಿಯ ಆಸುಪಾಸಿನಲ್ಲಿ ನೆಲೆಯೂರಿದರು. ೨೦೦೦ ವರ್ಷಗಳಷ್ಟು ಹಳೆಯದಾದ ಭಾರತದ ಅಭಿಜಾತ ಸಂಸ್ಕೃತಿಯ ಅಂತ್ಯವಾದ ಇದು ಭಾರತ ಇತಿಹಾಸದ ಹೊಸ ಆರಂಭಕ್ಕೆ ನಾಂದಿಯಾಯಿತು.
[ಬದಲಾಯಿಸಿ] ಇಸ್ಲಾಮೀಯ ಸುಲ್ತಾನಿಕೆಗಳು
ಭಾರತದ ನೆರೆ ಪ್ರದೇಶವಾದ ಪರ್ಷಿಯಾವನ್ನು ಆಕ್ರಮಿಸಿದ ನಂತರ ಅರಬ್-ತುರ್ಕರು ಸಂಪದ್ಭರಿತ ಭಾರತವನ್ನು ಆಕ್ರಮಿಸುವ ಯೋಜನೆ ಹೊಂದಿದ್ದರು. ಆಗಿನ ಕಾಲದಲ್ಲಿ ವಜ್ರದ ಗಣಿಗಳು ಕೇವಲ್ ಭಾರತದಲ್ಲಷ್ಟೇ ಇದ್ದವು. ಉತ್ತರ ಭಾರತದ ರಾಜ್ಯಗಳ ವಿರೋಧದ ಹೊರತಾಗಿಯೂ ಉತ್ತರ ಭಾರತದಲ್ಲಿ ಇಸ್ಲಾಮೀಯ ಸಾಮ್ರಾಜ್ಯ ಸ್ಥಾಪಿಸುವಲ್ಲಿ ಯಶಸ್ವಿಯಾದರು. ತುರ್ಕರು ದಂಡೆತ್ತಿ ಬರುವ ಮುಂಚೆ ಮುಸ್ಲಿಂ ವ್ಯಾಪಾರಿಗಳು ದಕ್ಷಿಣ ಭಾರತದ ಕರಾವಳಿ, ಅದರಲ್ಲೂ ಕೇರಳದಲ್ಲಿ ನೆಲೆಯೂರಿದ್ದರು. ಇದರಿಂದ ಪಶ್ಚಿಮದ ದಿಕ್ಕಿನಿಂದ ಇಸ್ಲಾಂ ಧರ್ಮವು ಭಾರತದ ಧಾರ್ಮಿಕ ಸಂಸ್ಕೃತಿಗೆ ಬಂದು ಸೇರಿತು.
[ಬದಲಾಯಿಸಿ] ದೆಹಲಿ ಸುಲ್ತಾನಿಕೆ
೧೨ನೇ ಮತ್ತು ೧೩ನೇ ಶತಮಾನಗಳಲ್ಲಿ ಅರಬ್ಬರು, ತುರ್ಕರು, ಮತ್ತು ಆಫ್ಘನ್ನರು ಉತ್ತರ ಭಾರತದ ಕೆಲವು ಪ್ರದೇಶಗಳನ್ನು ಆಕ್ರಮಿಸಿ ದೆಹಲಿ ಸುಲ್ತಾನಿಕೆಯನ್ನು ಸ್ಥಾಪಿಸಿದರು. ನಂತರ ಗುಲಾಮ ಸಾಮ್ರಾಜ್ಯ ಉತ್ತರ ಭಾರತದ ಬಹುತೇಕ ಪ್ರದೇಶಗಳನ್ನು ಆಕ್ರಮಿಸುವಲ್ಲಿ ಯಶಸ್ವಿಯಾಯಿತು. ನಂತರ ಖಿಲ್ಜಿ ಸಾಮ್ರಾಜ್ಯ ಮಧ್ಯ ಭಾರತವನ್ನು ಆಕ್ರಮಿಸಿದರೂ ಕೂಡ ಸಂಪೂರ್ಣ ಉಪಖಂಡವನ್ನು ವಶಪಡಿಸಿಕೊಳ್ಳುವುದರಲ್ಲಿ ಸೋತರು.
[ಬದಲಾಯಿಸಿ] ಮೊಘಲರ ಕಾಲ ಕ್ರಿ.ಶ ೧೫೨೬-೧೭೦೭
ತೈಮೂರನ ವಂಶದ ಬಾಬರನು ಖೈಬರ್ ಕಣಿವೆಯನ್ನು ದಾಟಿಬಂದು, ಮುಂದೆ ಎರಡು ಶತಮಾನಕ್ಕೂ ಹೆಚ್ಚು ಕಾಲ ಮೆರೆದ, ಮೊಘಲ್ ಸಾಮ್ರಾಜ್ಯವನ್ನು ೧೫೨೬ರಲ್ಲಿ ಸ್ಥಾಪಿಸಿದನು. ೧೬೦೦ರ ಹೊತ್ತಿಗಾಗಲೇ ಭಾರತ ಉಪಖಂಡದ ಬಹಳಷ್ಟು ಭಾಗ ಮೊಘಲರ ಆಳ್ವಿಕೆಗೆ ಒಳಪಟ್ಟಿತ್ತು. ೧೭೦೭ರ ನಂತರ ಕ್ರಮೇಣ ಅಧೋಗತಿ ಹಿಡಿದ ಮೊಘಲ್ ಸಾಮ್ರಾಜ್ಯ , ೧೮೫೭ರ ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮದ ವೇಳೆಗೆ ಸಂಪೂರ್ಣ ನೆಲ ಕಚ್ಚಿತು. ಈ ಕಾಲಾವಧಿಯಲ್ಲಿ ಭಾರತದ ಉಪಖಂಡದ ಸಾಮಾಜಿಕ ಜೀವನವು ಬಹಳಷ್ಟು ಬದಲಾವಣೆಗಳನ್ನು ಕಂಡಿತು. ಹಿಂದೂ ಬಹುಮತದ ಪ್ರದೇಶವನ್ನು ಆಳುತ್ತಿದ್ದ ಮೊಘಲ್ ರಾಜರುಗಳಲ್ಲಿ ಕೆಲವರು ಧಾರ್ಮಿಕ ಸಹಿಷ್ಣುತೆಯನ್ನು ತೋರಿದರೆ, ಇನ್ನು ಕೆಲವರು ಉದಾರವಾಗಿ ಹಿಂದೂ ಸಂಸ್ಕೃತಿಯನ್ನು ಪ್ರೋತ್ಸಾಹಿಸಿದರು. ಇನ್ನೂ ಕೆಲವರು, ಹಿಂದೂ ದೇವಾಲಯಗಳನ್ನು ಹಾಳುಗೆಡವಿ, ಮುಸ್ಲಿಮರಲ್ಲದವರ ಮೇಲೆ ವಿಶೇಷ ತಲೆಗಂದಾಯವನ್ನು ಹೇರಿದರು. ತನ್ನ ಉತ್ತುಂಗ ಕಾಲದಲ್ಲಿ ಮೌರ್ಯ ಸಾಮ್ರಾಜ್ಯಕ್ಕಿಂತ ಸ್ವಲ್ಪ ದೊಡ್ಡದಾಗಿದ್ದ ಈ ರಾಜ್ಯವು ,ಅಧೋಗತಿ ಹಿಡಿಯುತ್ತಿದ್ದಂತೆ, ಅನೇಕ ಸಣ್ಣಪುಟ್ಟ ರಾಜ್ಯಗಳು ಸ್ವತಂತ್ರವಾಗಿ ಅಧಿಕಾರಕ್ಕೆ ಬಂದವು. ಹಾಗೆ ನೋಡಿದರೆ, ಮೊಘಲರ ಅವನತಿಗೆ ಈ ರಾಜ್ಯಗಳ ತಲೆ ಎತ್ತುವಿಕೆಯೂ ಕಾರಣವಾಗಿತ್ತು ಎನ್ನಬಹುದು. ಮುಘಲ್ ಸಾಮ್ರಾಜ್ಯವು ಆವರೆಗೆ ಆಳಿದ ಸಾಮ್ರಾಜ್ಯಗಳಲ್ಲಿ ಬಹುಶಃ ಅತಿ ಶ್ರೀಮಂತವಾದುದಾಗಿತ್ತು.
ಮುಘಲರು ತಮ್ಮ ಪ್ರಜೆಗಳನ್ನು ಆಳಲು ಅಮಾನುಷ ತಂತ್ರಗಳನ್ನು ಉಪಯೋಗಿಸಿದರೂ, ಭಾರತದ ಸಂಸ್ಕೃತಿಯ ಜೊತೆ ಒಗ್ಗೂಡುವ ಪ್ರಯತ್ನ ಮಾಡಿದ ಕಾರಣ ದೆಹಲಿ ಸುಲ್ತಾನರಿಗಿಂತ ಯಶಸ್ವಿಗಳಾದರು. ಈ ರೀತಿಯಾಗಿಯೇ ಮಂಗೋಲ ರು ಏಷ್ಯಾ ವನ್ನು ಗೆದ್ದು ಚೀನಾ ಆಗಲೀ ಅಥವಾ ಪರ್ಶಿಯಾ ಆಗಲೀ, ಸ್ಥಳೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡರು. ಅಕ್ಬರ್ ಇದಕ್ಕೆ ಪ್ರಖ್ಯಾತನಾಗಿದ್ದನು. ಮುಘಲ್ ದೊರೆಗಳು ತ್ವರಿತವಾಗಿ ಸ್ಥಳೀಯ ರಾಜಪರಿವಾರದವರನ್ನು ವಿವಾಹವಾಗಿ, ಭಾರತೀಯ ಸಂತತಿಯನ್ನು ಹೊಂದಿದರು. ಈ ಸಂತತಿಯು ಸ್ಥಳೀಯ ರಾಜರುಗಳ ಜೊತೆ ಸೇರಿ ಮಂಗೋಲ-ಪರ್ಶಿಯನ್ ಸಂಸ್ಕೃತಿಯನ್ನು ಪ್ರಾಚೀನ ಭಾರತೀಯ ಶೈಲಿಗಳಿಗೆ ಸಮ್ಮಿಶ್ರಗೊಳಿಸಿ ಇಂಡೋ-ಸರ್ಸೆನಿಕ್ ಕಲೆಯನ್ನು ಹುಟ್ಟುಹಾಕಿದರು. ಈ ಸಂಸ್ಕೃತಿಯನ್ನು ತೊಡೆದು ಹಾಕಿದ ಔರಂಗಜೇಬ್ ತನ್ನ ನಿರ್ದಯತೆ ಮತ್ತು ಕೇಂದ್ರೀಕರಣದಿಂದ ಬಹುತತ್ವವಾದವನ್ನು ಅಳಿಸಿಹಾಕಿ ಬಹುಸಂಖ್ಯೆಯಲ್ಲಿದ್ದ ಹಿಂದೂ ಜನಾಂಗದವರ ಅವಕೃಪೆಗೊಳಗಾದನು. ಹೀಗೆ ಮುಘಲ್ ಸಾಮ್ರಾಜ್ಯದ ಪತನಕ್ಕೆ ಕಾರಣನಾದನು.
ಹೆಸರಾಂತ ಮೊಘಲ ಸಾಮ್ರಾಟರುಗಳು | ||||||||||||
ಚಕ್ರವರ್ತಿ | ಆಳ್ವಿಕೆ ಪ್ರಾರಂಭ | ಆಳ್ವಿಕೆ ಅಂತ್ಯ | ||||||||||
---|---|---|---|---|---|---|---|---|---|---|---|---|
ಬಾಬರ್ | ೧೫೨೬ | ೧೫೩೦ | ||||||||||
ಹುಮಾಯೂನ್ | ೧೫೩೦ | ೧೫೫೬ | ||||||||||
ಅಕ್ಬರ್ | ೧೫೫೬ | ೧೬೦೫ | ||||||||||
ಜಹಾಂಗೀರ್ | ೧೬೦೫ | ೧೬೨೭ | ||||||||||
ಶಹಜಹಾನ್ | ೧೬೨೭ | ೧೬೫೮ | ||||||||||
ಔರಂಗಜೇಬ | ೧೬೫೮ | ೧೭೦೭ |
[ಬದಲಾಯಿಸಿ] ಮೊಘಲರ ನಂತರದ ಕಾಲ
ಈ ಕಾಲದಲ್ಲಿ ಮರಾಠ ಮತ್ತಿನ್ನಿತರ ಪ್ರಾಂತೀಯ ರಾಜ್ಯಗಳ ಉಗಮ ಮತ್ತು ಐರೋಪ್ಯರ ಆಗಮನವಾಯಿತು.
[ಬದಲಾಯಿಸಿ] ಮರಾಠರ ಒಕ್ಕೂಟ ೧೬೭೪-೧೭೬೧
ಬಿಜಾಪುರ ಸುಲ್ತಾನನ ರಾಜ್ಯದ ಭಾಗವೊಂದನ್ನು ಆಕ್ರಮಿಸಿದ ಶಿವಾಜಿಯು ೧೬೭೪ರಲ್ಲಿ ಮರಾಠಾ ಅಧಿಪತ್ಯವನ್ನು ಸ್ಥಾಪಿಸಿದನು. ದಖ್ಖನಿ ಪ್ರದೇಶದ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಿದ ಮೇಲೆ ಶಿವಾಜಿಯು ಮೊಘಲರ ಔರಂಗಜೇಬನ ಮೇಲೆ ಯುದ್ಧ ಸಾರಿದನು. ೧೮ನೆಯ ಶತಮಾನದ ಹೊತ್ತಿಗೆ ಈ ಸಾಮ್ರಾಜ್ಯವು, ಪೇಶ್ವೆಗಳ ಆಡಳಿತದಲ್ಲಿ ಒಕ್ಕೂಟವಾಗಿ ಬದಲಾಗಿತ್ತು. ೧೭೬೦ರಲ್ಲಿ ಈ ರಾಜ್ಯವು ಉಪಖಂಡದ ಬಹುತೇಕ ಭಾಗವನ್ನು ಒಳಗೊಂಡಿತ್ತು. ಮೂರನೆಯ ಪಾಣಿಪತ್ ಯುದ್ಧ ೧೭೬೧ ದಲ್ಲಿ ಅಫಘಾನ ಅಹಮದ್ ಶಹಾ ಅಬ್ದಾಲಿಯಿಂದ ಸೋಲೊಪ್ಪುವುದರೊಂದಿಗೆ, ಮರಾಠರ ಏಳಿಗೆ ಕುಂಠಿತವಾಯಿತು. ಕೊಟ್ಟಕೊನೆಯ ಪೇಶ್ವೆ ಎರಡನೆಯ ಬಾಜೀರಾಯನು ಮೂರನೆಯ ಬ್ರಿಟಿಶ್ -ಮರಾಠಾ ಯುದ್ಧದಲ್ಲಿ ಬ್ರಿಟಿಶರಿಂದ ಪರಾಜಿತನಾದನು.
[ಬದಲಾಯಿಸಿ] ಮೈಸೂರು ಸಂಸ್ಥಾನ
ವೊಡೆಯರ್ ವಂಶದವರಿಂದ ೧೪೦೦ರಲ್ಲಿ ಮೈಸೂರು ಸಂಸ್ಥಾನವು ಸ್ಥಾಪಿತವಾಯಿತು. ಹೈದರಾಲಿ ಮತ್ತು ನಂತರ ಅವನ ಮಗ ಟಿಪ್ಪುಸುಲ್ತಾನ್ ಕಾಲದಲ್ಲಿ ವೊಡೆಯರ್ ಆಳ್ವಿಕೆಗೆ ಭಂಗ ಬಂದಿತು. ಈ ಕಾಲದಲ್ಲಿ ಮೈಸೂರು, ಒಂದಾದಮೇಲೊಂದು ಯುದ್ಧಗಳನ್ನು ಎದುರಿಸಿತು. ಇವುಗಳಲ್ಲಿ ಬಹುತೇಕ ಹೋರಾಟಗಳು ಫ್ರೆಂಚರ ಸಹಾಯ (ಅಥವಾ ಸಹಾಯದ ವಾಗ್ದಾನ)ದೊಂದಿಗೆ ಬ್ರಿಟಿಷರ ವಿರುದ್ಧವಾಗಿದ್ದು ,ಕೆಲವೊಮ್ಮೆ ಬ್ರಿಟಿಷ್ ಮತ್ತು ಮರಾಠದ ಜಂಟಿ ಪಡೆಗಳ ವಿರುದ್ಧವೂ ಆಗಿತ್ತು. ೧೭೯೯ರ ನಾಲ್ಕನೆಯ ಮೈಸೂರು ಯುದ್ಧದಲ್ಲಿ ಟಿಪ್ಪು ಮಡಿದ ಮೇಲೆ ವೊಡೆಯರ್ ವಂಶಸ್ಥರು, ಬ್ರಿಟಿಷರ ಅಧೀನ ರಾಜರಾಗಿ ಸೀಮಿತ ರಾಜ್ಯಾಧಿಕಾರವನ್ನು ಮರಳಿ ಪಡೆದರು. ಮುಂದೆ ಮೈಸೂರು ಸಂಸ್ಥಾನವು, ರಾಜ್ಯಗಳ ಭಾಷಾವಾರು ವಿಂಗಡನೆಯ ಸಮಯದಲ್ಲಿ , ಇತರ ಕನ್ನಡ ಭಾಷಿಕ ಪ್ರದೇಶಗಳೊಂದಿಗೆ ಲೀನವಾಗಿ , ಮೈಸೂರು (ಇಂದಿನ ಕರ್ನಾಟಕ) ರಾಜ್ಯದ ಭಾಗವಾಯಿತು.
[ಬದಲಾಯಿಸಿ] ಪಂಜಾಬ್
ಸಿಖ್ ಪಂಥದ ದಶಗುರುಗಳಿಂದ ಸ್ಥಾಪಿತವಾದ ಈ ರಾಜ್ಯವು ಇಂದಿನ ಪಂಜಾಬಿನಲ್ಲಿತ್ತು. ಮಹಾರಾಜ ರಣಜಿತ್ ಸಿಂಗನ ಆಡಳಿತದಲ್ಲಿ , ಈ ರಾಜ್ಯವು ವಿಸ್ತರಿಸಿ , ಕಾಶ್ಮೀರ, ಪೇಶಾವರ, ಹರಿಯಾಣ ಮತ್ತು ಹಿಮಾಚಲ ಪ್ರದೇಶದವರೆಗೂ ಹಬ್ಬಿತ್ತು. ಮುಂದೆ ಬ್ರಿಟಿಷರು , ಭಾರತದಲ್ಲಿ ಬೇರು ಬಿಡುತ್ತಿದ್ದಾಗ, ಅವರ ಆಳ್ವಿಕೆಗೆ ಒಳಗಾದ ಕೊಟ್ಟಕೊನೆಯ ಪ್ರದೇಶಗಳಲ್ಲಿ , ಈ ರಾಜ್ಯವೂ ಒಂದು. ಬ್ರಿಟಿಷರೊಂದಿಗಿನ ಹೋರಾಟಗಳಲ್ಲಿ ಈ ರಾಜಸತ್ತೆಯು ಅಸ್ತಂಗತವಾಯಿತು.
[ಬದಲಾಯಿಸಿ] ದುರಾನಿ ಸಾಮ್ರಾಜ್ಯ
೧೭೪೮ ರಲ್ಲಿ ಅಫ್ಘಾನಿಸ್ತಾನ ನಾಯಕ ಅಹ್ಮದ್ ಷಾಹ್ ದುರಾನಿ " ಹಿಂದೂ "ಗಳ ಮೇಲೆ "ಜಿಹಾದ್" ಘೋಷಿಸಿ ಸಿಂಧೂ ನದಿ ಯನ್ನು ದಾಟಿದನು. ಅವನ ಪ್ರಥಮ ಭಾರತೀಯ ಗುರಿ ಲಾಹೋರ್ (ಈಗಿನ ಪಾಕಿಸ್ತಾನ) ಮೇಲೆ ೧೭೫೦ರಲ್ಲಿ ದಾಳಿ ಮಾಡಿದನು. ನಂತರ ಉಳಿದ ಪಂಜಾಬ್ , ಕಾಶ್ಮೀರ ಮತ್ತು ಅಂತಿಮವಾಗಿ ದೆಹಲಿ ಮೇಲೆ ದಂಡೆತ್ತಿದನು. ಅವನು ಮರಾಠ ರ ಮೇಲೆಯೂ ದಾಳಿ ಮಾಡಿದನು. ಭಾರತ ದಿಂದ ಹಲವಾರು ಹಲವಾರು ಅಮೂಲ್ಯ ವಸ್ತುಗಳನ್ನು ಕೊಂಡೊಯ್ದನು, ಅವುಗಳಲ್ಲಿ ಕೊಹಿನೂರ್ ವಜ್ರವೂ ಸೇರಿದೆ.
[ಬದಲಾಯಿಸಿ] ಗೂರ್ಖರು
ಹಿಂದೆ ಮೌರ್ಯ ಸಾಮ್ರಾಜ್ಯದ ಭಾಗವಾಗಿದ್ದ ನೇಪಾಳವನ್ನು ೧೮ನೇ ಶತಮಾನದಲ್ಲಿ ಗೂರ್ಖರು ಕಠ್ಮಂಡು ಕಣಿವೆಯ ಮೂಲಕ ಆಕ್ರಮಿಸಿದರು. ನಂತರ ಬ್ರಿಟಿಷರ ವಸಾಹತುಶಾಹಿ ಆಡಳಿತದ ಕಾಲದಲ್ಲಿ ಗೂರ್ಖರು ಬ್ರಿಟಿಷರ ಸೇನೆಯನ್ನು ಕೂಡಿದ್ದರಿಂದ ನೇಪಾಳ ಬ್ರಿಟಿಷ್ ಸಾಮ್ರಾಜ್ಯದ ಪುತ್ಥಳಿ ರಾಜ್ಯವಾಯಿತು.
[ಬದಲಾಯಿಸಿ] ವಸಾಹತು ಯುಗ
ಈ ಕಾಲದಲ್ಲಿ ಏಷ್ಯಾ, ಆಫ್ರಿಕಾ, ಮತ್ತು ದಕ್ಷಿಣ ಅಮೆರಿಕದ ಹಲವು ಪ್ರದೇಶಗಳಂತೆ ಭಾರತವು ವಸಾಹತುಶಾಹಿ ಶಕ್ತಿಗಳ ಗುರಿಯಾಗಿ, ಅಂತಿಮವಾಗಿ ಬ್ರಿಟಿಷ್ ಸಾಮ್ರಾಜ್ಯದ ತೆಕ್ಕೆಗೆ ಬಂದಿತು. ಇದು ಆಧುನಿಕ ಯುಗದ ಒಂದು ಮುಖ್ಯ ಘಟ್ಟ. ನಂತರದ ಸ್ವಾತಂತ್ರ್ಯ ಹೋರಾಟ ಭಾರತದ ಮೊದಲನೇ ಸ್ವಾತಂತ್ರ್ಯ ಸಂಗ್ರಾಮದಿಂದ ಪ್ರಾರಂಭವಾಗಿ, ತದನಂತರ ಮಹಾತ್ಮಾ ಗಾಂಧಿ ಮತ್ತಿನ್ನಿತರ ನಾಯಕರ ಮುಂದಾಳತ್ವದಲ್ಲಿ ಮುಂದುವರೆಯಿತು.
[ಬದಲಾಯಿಸಿ] ಕಂಪನಿ ಆಡಳಿತ

ವಾಸ್ಕೊ ಡ ಗಾಮ ೧೪೯೮ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡು ಹಿಡಿದದ್ದು ಐರೋಪ್ಯ ವಸಾಹತುಗಳು ಸ್ಥಾಪಿತವಾಗಲು ಕಾರಣವಾಯಿತು. ಪೋರ್ಚುಗೀಸರು ಗೋವಾ, ದಮನ್, ದಿಯು, ಮತ್ತು ಮುಂಬೈ. ಬ್ರಿಟಿಷರು ದಕ್ಷಿಣ ಏಷ್ಯಾದಲ್ಲಿ ತಮ್ಮ ಮೊದಲ ವಸಾಹತನ್ನು ೧೬೧೯ರಲ್ಲಿ ಸ್ಥಾಪಿಸಿದ್ದು ವಾಯವ್ಯ ಬಂದರು ಪಟ್ಟಣವಾದ ಸೂರತ್ ನಗರದಲ್ಲಿ. ನಂತರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ತನ್ನ ಶಾಖೆಗಳನ್ನು ಮದ್ರಾಸ್, ಮುಂಬೈ, ಮತ್ತು ಕಲ್ಕತ್ತಾಗಳಲ್ಲಿ ಪ್ರಾಂತೀಯ ರಾಜರ ರಕ್ಷಣೆಯಲ್ಲಿ ತೆರೆಯಿತು.
ಫ್ರೆಂಚರು ೧೭ನೇ ಶತಮಾನದಲ್ಲಿ ದಕ್ಷಿಣ ಭಾರತದ ಬಹಳಷ್ಟು ಭಾಗಗಳಲ್ಲಿ ಸೇರಿಕೊಂಡರು. ಆದರೆ ಬ್ರಿಟಿಷರ ಜೊತೆ ಕದನಗಳ ನಂತರ ಬಹುತೇಕ ಪ್ರದೇಶಗಳನ್ನು ಕಳೆದುಕೊಂಡರು. ಆದರೆ ಕೆಲವು ವಸಾಹತುಗಳಾದ ಪಾಂಡಿಚೇರಿ ಮತ್ತು ಚಂದ್ರನಗರಗಳನ್ನು ಹಿಡಿದುಕೊಂಡರು.
ಡಚ್ಚರು ಭಾರತದಲ್ಲಿ ಅಷ್ಟೊಂದು ಪ್ರಮುಖವಾಗಿ ನೆಲೆಯೂರಲಿಲ್ಲ. ಅವರು ತಿರುವಾಂಕೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಆಳಿದರು. ಅವರ ಗಮನ ಮುಖ್ಯವಾಗಿ ಶ್ರೀಲಂಕಾ ಮತ್ತು ಇಂಡೊನೇಷ್ಯಾಗಳಾಗಿದ್ದವು. ಅವರು ಕೇರಳ ರಾಜ್ಯದ ಸೇನೆಗೆ ತಾಲೀಮು ಮಾಡಿ ಸಹಾಯ ಮಾಡಿದರು.
[ಬದಲಾಯಿಸಿ] ಬ್ರಿಟನ್ನಿನ ಅಧೀನತೆಯಲ್ಲಿ
೧೭೫೭ರಲ್ಲಿ ರಾಬರ್ಟ್ ಕ್ಲೈವ್ ಮುಂದಾಳತ್ವದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಪ್ಲಾಸಿ ಕದನದಲ್ಲಿ ಬಂಗಾಳದ ನವಾಬ ಸಿರಾಜ್ ಉದ್ ದೌಲಾನನ್ನು ಸೋಲಿಸಿ ಬಂಗಾಳವನ್ನು ಕೊಳ್ಳೆ ಹೊಡೆದು ಆಕ್ರಮಿಸಿದರು. ಈ ರೀತಿ ಬಂಗಾಳವು ಕಂಪನಿಯ ಆಡಳಿತಕ್ಕೆ ಬಂದಿತು. ಕಂಪನಿಯು ಬಂಗಾಳದ ವ್ಯಾಪಾರವನ್ನೂ ತನ್ನದಾಗಿಸಿಕೊಂಡಿತು.
೧೮೫೦ರ ಕಾಲದಲ್ಲಿ ಕಂಪನಿಯು ಭಾರತ ಉಪಖಂಡದ ಬಹುತೇಕ ಪ್ರದೇಶಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಸಿಪಾಯಿಗಳ ನೇತೃತ್ವದಲ್ಲಿ ಭುಗಿಲೆದ್ದ ೧೮೫೭ರ ದಂಗೆಯನ್ನು ಬ್ರಿಟಿಷರು ಸದೆ ಬಡಿದರು. ಇದರ ನಂತರ ಭಾರತದ ಆಡಳಿತ ಬ್ರಿಟಿಷ್ ರಾಜಮನೆತನದಡಿ ಬಂದಿತು. ಅಳಿದುಳಿದ ಪ್ರದೇಶಗಳನ್ನು ಪ್ರಾಂತೀಯ ರಾಜರ ಮೂಲಕ ಹತೋಟಿಯಲ್ಲಿಟ್ಟುಕೊಂಡರು.
[ಬದಲಾಯಿಸಿ] ಸ್ವಾತಂತ್ರ್ಯ ಚಳುವಳಿ
೧೯ನೇ ಶತಮಾನದ ಅಂತ್ಯದಲ್ಲಿ ಭಾರತವು ಸ್ವರಾಜ್ಯದ ಪರಿಕಲ್ಪನೆಯನ್ನು ಅರಿತುಕೊಂಡಿತು. ೧೯೨೦ರ ನಂತರ ಮಹಾತ್ಮಾ ಗಾಂಧಿ ಮತ್ತು ಸುಭಾಷ್ ಚಂದ್ರ ಬೋಸ್ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಬ್ರಿಟಿಷ್ ವಸಾಹತುಶಾಹಿಯ ವಿರುದ್ಧದ ಜನಪರ ಆಂದೋಲನವನ್ನಾಗಿ ಮಾಡಿದರು. ೧೯೪೭ರಲ್ಲಿ ಸ್ವಾತಂತ್ರ್ಯದ ನಂತರ ಜಾತ್ಯತೀತ ಭಾರತ ಮತ್ತು ಇಸ್ಲಾಮೀಯ ಪಾಕಿಸ್ತಾನಗಳ ಉದ್ಭವವಾಯಿತು. ಈ ಇಬ್ಭಾಗದ ಸಮಯ ಸಿಖ್ಖರು, ಹಿಂದೂಗಳು, ಮತ್ತು ಮುಸ್ಲಿಮರ ಮಧ್ಯೆ ಪಂಜಾಬ್, ಬಂಗಾಳ, ಮತ್ತು ದೆಹಲಿಗಳಲ್ಲಿ ದಂಗೆಗಳುಂಟಾಗಿ ಎರಡು ಲಕ್ಷಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿದರು. ಒಂದು ಕೋಟಿಗೂ ಹೆಚ್ಚು ಹಿಂದೂಗಳು ಮತ್ತು ಮುಸ್ಲಿಮರು ತಮ್ಮ ಹುಟ್ಟೂರು ಬಿಟ್ಟು ಬೇರೆ ದೇಶಕ್ಕೆ ವಲಸೆ ಹೋದರು. ಚರಿತ್ರೆಯಲ್ಲಿ ಇಷ್ಟು ಬೃಹತ್ ಪ್ರಮಾಣದ ವಲಸೆ ಹಿಂದೆಂದಿಗೂ ಕಂಡು ಬಂದಿಲ್ಲ.
[ಬದಲಾಯಿಸಿ] ಭಾರತ ಗಣರಾಜ್ಯ
ಸ್ವಾತಂತ್ರ್ಯ ಸಿಕ್ಕ ನಂತರ ಭಾರತವು ನೆರೆಯ ದೇಶಗಳ ವಿರುದ್ಧ ಬಹಳಷ್ಟು ಯುದ್ಧಗಳನ್ನು ಮಾಡಿದೆ. ಇವುಗಳಲ್ಲಿ ಪ್ರಮುಖ ನಾಲ್ಕು ಭಾರತ-ಪಾಕಿಸ್ತಾನ ಯುದ್ಧಗಳು ಮತ್ತು ಭಾರತ-ಚೀನಾ ಯುದ್ಧ ಸೇರಿವೆ. ೧೯೭೪ ರಲ್ಲಿ ಅಣುಸಾಧನವನ್ನು ಸ್ಫೋಟಿಸಿ ೧೯೯೮ ರಲ್ಲಿ ಸರಣಿ ಪರೀಕ್ಷೆಗಳನ್ನು ನಡೆಸಿ ಅಣು ಘೋಷಿತ ರಾಷ್ಟ್ರ ಗಳ ಪಟ್ಟಿಗೆ ಸೇರಿತು. ಬ್ರಿಟಿಷರು ಬಿಟ್ಟು ಹೋದ ನಂತರ ಸಮಾಜವಾದ ದಿಂದ ಪ್ರೇರಿತಗೊಂಡ ಭಾರತ ನಿಧಾನ ಪ್ರಗತಿ ಕಾಣುತ್ತಿತ್ತು. ೧೯೯೦ ರ ದಶಕದಲ್ಲಿ ಈಗಿನ ಪ್ರಧಾನಿ ಮನಮೋಹನ ಸಿಂಗ್ ಆರ್ಥಿಕವ್ಯವಸ್ಥೆಯ ಸುಧಾರಣೆ ಮಾಡಿದ ಬಳಿಕ ಭಾರತದ ಅರ್ಥವ್ಯವಸ್ಥೆಯು ವೇಗವಾಗಿ ಬೆಳೆಯಲು ಆರಂಭಿಸಿತು. ಇಂದು ೨೧ನೆಯ ಶತಮಾನ ದಲ್ಲಿ ಭಾರತವನ್ನು ಬೆಳೆಯುತ್ತಿರುವ ಆರ್ಥಿಕ ಮಹಾಶಕ್ತಿ ಎಂದು ಪರಿಗಣಿಸಲಾಗುತ್ತಿದೆ,[೮] . ಇಂದು ಸಮಗ್ರ ದೇಶೀಯ ಉತ್ಪಾದನೆ(GDP)ಯಲ್ಲಿ ಪ್ರಪಂಚದಲ್ಲಿ ೧೦ನೇ ಸ್ಥಾನ ಮತ್ತು ಕೊಳ್ಳುವ ಸಾಮರ್ಥ್ಯದಲ್ಲಿ ನಾಲ್ಕನೇ ಅತಿ ದೊಡ್ಡ ದೇಶವಾಗಿ ಹೊರಹೊಮ್ಮಿದೆ.

ಸ್ವಾತಂತ್ರ್ಯದ ನಂತರ ಭಾರತವು ಪಾಕಿಸ್ತಾನದ ಜೊತೆ ಮೂರು ಯುದ್ಧ ಮತ್ತು ಒಂದು ಕದನಗಳನ್ನು ಮಾಡಿದೆ. ೧೯೪೭ ಮತ್ತು ೧೯೬೫ರಲ್ಲಿ ಕಾಶ್ಮೀರದ ಹತೋಟಿಗಾಗಿ ಮತ್ತು ೧೯೭೧ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಯುದ್ಧಗಳು ನಡೆದವು. ಭಾರತವು ೧೯೬೨ರಲ್ಲಿ ಚೀನಾದ ಜೊತೆಯೂ ಯುದ್ಧ ಮಾಡಿದೆ.
ಭಾರತವು ಇಂದು ಅಣುಶಕ್ತಿ ಎಂಬುದರ ಜೊತೆಗೇ ಉನ್ನತ ಅಂತರಿಕ್ಷ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದೆ. ೧೯೯೦ರ ದಶಕದಲ್ಲಿ ಆರ್ಥಿಕ ಸುಧಾರಣೆಗಳ ನಂತರ ಭಾರತದ ಆರ್ಥಿಕತೆ ಮುನ್ನುಗ್ಗುತ್ತಿದೆ. ಅಂತಾರಾಷ್ಟ್ರೀಯ ಉತ್ಪನ್ನಗಳಿಗೆ ಬೃಹತ್ ಮಾರುಕಟ್ಟೆಯಾಗಿ ಅದರ ಅಭಿವೃದ್ಧಿ ವೇಗವಾಗಿ ಸಾಗಿದೆ. ೨೧ನೇ ಶತಮಾನದಲ್ಲಿ ಭಾರತವು ಉಗಮಿಸುತ್ತಿರುವ ಆರ್ಥಿಕ ಶಕ್ತಿಯಾಗಿ ಮೂಡಲು ಅದರ ಮಾನವ ಮತ್ತು ನೈಸರ್ಗಿಕ ಸಂಪನ್ಮೂಲಗಳು ಪ್ರಮುಖ ಪಾತ್ರ ವಹಿಸುತ್ತವೆ. ಆರ್ಥಿಕ ಪರಿಣತರು ಹೇಳುವ ಪ್ರಕಾರ, ೨೦೫೦ರ ವೇಳೆಗೆ ಭಾರತವು ಪ್ರಪಂಚದ ಮೂರು ಅತಿ ದೊಡ್ಡ ಆರ್ಥಿಕ ಶಕ್ತಿಗಳಲ್ಲಿ ಒಂದಾಗಲಿದೆ.[1]
[ಬದಲಾಯಿಸಿ] ಮೂಲಗಳು
- ↑ Mallory, J.P. (1989). In Search of the Indo-Europeans: Language, Archaeology and Myth. London: Thames & Hudson. ISBN 0-500-27616-1. “The great majority of scholars insist that the Indo-Aryans were intrusive into northwest India.”
- ↑ The Aryan Non-Invasionist Model By Koenraad Elst
- ↑ The World Economy: A Millennial Perspective - Angus Maddison, Organization for Economic Cooperation & Devel (April 2001) - ISBN 9264186085
- ↑ The World Economy: A Millennial Perspective - Angus Maddison, Organization for Economic Cooperation & Devel (April 2001) - ISBN 9264186085
- ↑ ನರ್ಮದಾದ ಪೂರ್ವಮಾನವ
- ↑ ಆಧುನಿಕ ಮಾನವನ ಆಗಮ
- ↑ ಗುಜರಾತಿನ ಶಿಲಾಯುಗ ಪಳೆಯುಳಿಕೆಗಳು
- ↑ Chaze, Aaron (2006). India: An Investor’s Guide to the Next Economic Superpower. USA: Wiley. ISBN 0-470-82194-9.