ಕುಂದಾಪುರ

From Wikipedia

ಕುಂದಾಪುರ, ಕುಂದಾಪುರ ತಾಲೂಕಿನ ಪ್ರಮುಖ ಪಟ್ಟಣವಾಗಿದೆ. ಇದು ಉಡುಪಿಯಿಂದ ೩೬ ಕಿಲೋಮೀಟರ್ ದೂರದಲ್ಲಿದೆ. ಪಶ್ಚಿಮ ದಿಕ್ಕಿನಲ್ಲಿರುವ ೪೫ ಕಿಲೋಮೀಟರುಗಳಷ್ಟು ದೂರದ ಸಮುದ್ರ ಕಿನಾರೆಯು ಕುಂದಾಪುರ ತಾಲೂಕಿನ ಪ್ರಮುಖ ಆಕರ್ಷಣೆಗಳಲ್ಲೊಂದು. ಈ ತಾಲೂಕಿನ ಗಂಗೊಳ್ಳಿಯಲ್ಲಿರುವ ಸೇತುವೆಯು ಉಡುಪಿ ಜಿಲ್ಲೆಯಲ್ಲೇ ಅತೀ ದೊಡ್ಡದು. ಬಡಗುತಿಟ್ಟು ಯಕ್ಷಗಾನ ಕಲೆಯನ್ನು ಬೆಳೆಸುವಲ್ಲಿ ಕುಂದಾಪುರದ ಪಾತ್ರ ಬಹಳ ಪ್ರಮುಖ.

ಪರಿವಿಡಿ

[ಬದಲಾಯಿಸಿ] ಇತಿಹಾಸ

ಈ ಊರಿನ ಹೆಸರು ಪಂಚಗಂಗಾವಲಿ ತೀರದಲ್ಲಿ ಕುಂದವರ್ಮನೆಂಬ ರಾಜನು ಕಟ್ಟಿಸಿದ ಕುಂದೇಶ್ವರ ದೇವಸ್ಥಾನದಿಂದ ಬಂದಿದೆಯೆಂದು ಪ್ರತೀತಿ. ಕುಂದಾಪುರವೆಂದರೆ "ಸೂರ್ಯನ ಊರು" ಎಂಬ ಅರ್ಥವೂ ಇದೆ. ಈ ಊರಿನಲ್ಲಿ "ಮಹಾಲಿಂಗೇಶ್ವರ" ದೇವರ ಇನ್ನೊಂದು ದೇವಸ್ಥಾನವೂ ಇದೆ.ವಿಜಯನಗರ ಸಾಮ್ರಾಜ್ಯದ ಪತನದ ನಂತರ ಬಲಿಷ್ಠರಾದ ಬೈಂದೂರಿನ ರಾಜರ ಪ್ರಮುಖವಾರ ಬಂದರು ಈ ಊರಿನಲ್ಲಿ ಇತ್ತು. ಪೋರ್ಚುಗೀಸರು ೧೬ನೇ ಶತಮಾನದಲ್ಲಿ ಇಲ್ಲಿ ಬಂದು ನೆಲೆಸಿದರು ಹಾಗೂ ಒಂದು ಕೋಟೆಯನ್ನು ಕಟ್ಟಿದರು. ೧೭೯೯ ರಲ್ಲಿ ಟೀಪು ಸುಲ್ತಾನನ ಕಾಲನಂತರ ಈ ಪಟ್ಟಣವನ್ನು ಬ್ರಿಟೀಷರು ವಶಪಡಿಸಿಕೊಂಡರು. ಒಂದು ಕಾಲದಲ್ಲಿ ಈ ಊರಿನ ಹತ್ತಿರದ ಒಂದು ಸ್ವಚ್ಚ ನೀರಿನ ಕೆರೆಯಲ್ಲಿ ಟೀಪು ಸುಲ್ತಾನನಿಗೆಂದೇ ಒಂದು ವಿಶೇಷ ತಳಿಯ ಮೀನುಗಳನ್ನು ಸಾಕಲಾಗುತ್ತಿತ್ತು.

ಈ ಊರಿನ ಸುತ್ತ ಮುತ್ತ ಯಥೇಛ್ಛವಾಗಿ ಬೆಳೆಯುವ ಮಲ್ಲಿಗೆ (ಕುಂದ) ಹೂವಿನಿಂದಾಗಿಯೂ ಬಂದಿದೆಯೆಂದು ಹೇಳುತ್ತಾರೆ. ಇನ್ನು ಕೆಲವರು ಮನೆ ಕಟ್ಟುವ ಸಾಮಗ್ರಿಗಳಲ್ಲಿ ಒಂದಾದ ಕಂಬ (ಕುಂದ) ಎಂಬ ಪದದಿಂದಲೂ ಬಂದಿದೆಯೆಂದು ಹೇಳುತ್ತಾರೆ.

[ಬದಲಾಯಿಸಿ] ಪ್ರೇಕ್ಷಣೀಯ ಸ್ಥಳಗಳು

[ಬದಲಾಯಿಸಿ] ಬೈಂದೂರು

ಸೋಮೇಶ್ವರ ಕಡಲ ತೀರ
ಸೋಮೇಶ್ವರ ಕಡಲ ತೀರ
ಕೋಸಳ್ಳಿ ಜಲಪಾತ
ಕೋಸಳ್ಳಿ ಜಲಪಾತ


ಬೈಂದೂರು ಕುಂದಾಪುರದಿಂದ ಸುಮಾರು 32ಕಿ.ಮೀ ದೂರದಲ್ಲಿದೆ. ಕರ್ನಾಟಕದ ವಿವಿಧ ಪ್ರಸಿದ್ದ ಪ್ರವಾಸಿ ಸ್ಥಳಗಳಲ್ಲಿ ಬೈಂದೂರು ಒಂದು. ಮೊದಲು ಇಲ್ಲಿ ’ಬಿಂದುಋಷಿ’ ಎನ್ನುವ ಮಹರ್ಷಿಗಳು ತಪಸ್ಸು ಮಾಡುತ್ತಿದ್ದರಿಂದ ಬಿಂದುನಾಡು, ಬಿಂದುಪುರ, ಬಿಂದೂರು ಕ್ರಮೇಣ ಬೈಂದೂರು ಆಗಿ ಪರಿವರ್ತನೆ ಆಯಿತು ಎಂಬುವುದು ಕೆಲವು ತಜ್ಞರ ಅಭಿಪ್ರಾಯ. ಇಲ್ಲಿ ಹಲವಾರು ವರ್ಷಗಳ ಇತಿಹಾಸವಿರುವ "ಶ್ರೀ ಸೇನೆಶ್ವರ ದೇವಸ್ಥಾನ"ವು ಬಹಳ ಪ್ರಸಿದ್ದಿಯನ್ನು ಪಡೆದಿದೆ. ಬೈಂದೂರು ಹಲವಾರು ಪ್ರವಾಸಿ ಸ್ಥಳಗಳನ್ನು ಒಳಗೊಂಡಿದ್ದು ಅವುಗಳಲ್ಲಿ ಸೋಮೇಶ್ವರ ಕಡಲ ತೀರ,ಕೋಸಳ್ಳಿ ಜಲಪಾತ [ಜಲಪಾತ], ಸಾಯಿ ವಿಶ್ರಾಮ್ ಬೀಚ್ ರೆಸಾರ್ಟ್, ಕ್ಷಿತಿಜ ನೇಸರ ದಾಮ ಮುಂತಾದವುಗಳು ಹೆಸರುವಾಸಿಗಳಾಗಿದೆ.










[ಬದಲಾಯಿಸಿ] ಆನೆಗುಡ್ಡೆ (ಕುಂಭಾಶಿ)

ಆನೆಗುಡ್ಡೆ ವಿನಾಯಕ
ಆನೆಗುಡ್ಡೆ ವಿನಾಯಕ

ಉಡುಪಿಯಿಂದ ೩೨ ಕಿಲೋಮೀಟರ್ ಹಾಗೂ ಕುಂದಾಪುರದಿಂದ ೫ ಕಿಲೋಮೀಟರ್ ದೂರದಲ್ಲಿರುವ ಈ ಕ್ಷೇತ್ರದ ವಿನಾಯಕ ದೇವಸ್ಠಾನವು ಬಹು ಪ್ರಸಿಧ್ಧ. ಪ್ರತಿದಿನ ಈ ಸಾವಿರಾರು ಭಕ್ತಾದಿಗಳು ವಿನಾಯಕನ ದರ್ಶನವನ್ನು ಪಡೆಯುತ್ತಾರೆ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಸಿಧ್ಧವಾದ ದೇವಸ್ಥಾನಗಳಲ್ಲಿ ಇದೂ ಒಂದು. ಈ ಕ್ಷೇತ್ರವು ಪರಶುರಾಮ ಮಹರ್ಷಿಯ ಸೃಷ್ಟಿಯೆಂದು ವಾಡಿಕೆ. ಕಾಲಕ್ರಮೇಣ, ಈ ದೇವಸ್ಥಾನವಿರುವ ಸ್ಥಳವು ಬೇರೆ ಬೇರೆ ಹೆಸರುಗಳನ್ನು ಪಡೆದುಕೊಂಡಿತು. ಪುರಾಣಗಳ ಪ್ರಕಾರ ಈ ಕ್ಷೇತ್ರದಲ್ಲಿ ಬರಗಾಲವು ಬಂದಾಗ ಅಗಸ್ತ್ಯ ಮುನಿಗಳು ವರುಣನ ಮನವೊಲಿಸಲು ಯಜ್ನ್ಯವೊಂದನ್ನು ಇಲ್ಲಿ ನೆರವೇರಿಸಿದರು. ಈ ಯಜ್ನ್ಯವನ್ನು ಭಂಗಗೊಳಿಸಲು ಕುಂಭಾಸುರನೆಂಬ ರಾಕ್ಷಸನು ಋಷಿ ಮುನಿಗಳಿಗೆ ಉಪಟಳ ನೀಡಲಾರಂಭಿಸಿದನು. ಋಷಿಗಳನ್ನು ಕಾಪಾಡಲು ಭೀಮನು ಗಣೇಶನಿಂದ ವರವಾಗಿ ಪಡೆದ ಗಧೆಯಿಂದ ಕುಂಭಾಸುರನನ್ನು ಕೊಂದನು. ರಾಷ್ಟ್ರೀಯ ಹೆದ್ದಾರಿ ೧೭ ರಿಂದ ಅನತಿ ದೂರದಲ್ಲಿದ್ದರೂ ಕೂಡಾ, ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ.

[ಬದಲಾಯಿಸಿ] ಮರವಂತೆ

ಮರವಂತೆ ಕಡಲ ತೀರ
ಮರವಂತೆ ಕಡಲ ತೀರ

ಪಶ್ಚಿಮ ಕರಾವಳಿಯ ಅತ್ಯದ್ಭುತ ಕಡಲ ತೀರಗಳಲ್ಲಿ ಮರವಂತೆ (ತ್ರಾಸಿ) ಒಂದು. ಸೌಪರ್ಣಿಕಾ ನದಿ ಹಾಗೂ ಅರಬ್ಬೀ ಸಮುದ್ರವನ್ನು ರಾಷ್ಟ್ರೀಯ ಹೆದ್ದಾರಿ ೧೭ ಕೆಲವೇ ಅಡಿಗಳ ಅಂತರದಲ್ಲಿ ಬೇರ್ಪಡಿಸುತ್ತದೆ. ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಒಂದೇ ಜಾಗದಲ್ಲಿ ನೋಡಬಹುದಾದಂತಹ ಈ ಸ್ಥಳ ಪ್ರವಾಸಿಗರ ಸ್ವರ್ಗ.

[ಬದಲಾಯಿಸಿ] ಕೊಲ್ಲೂರು

ಕೊಲ್ಲೂರು ಮೂಕಾಂಬಿಕೆ
ಕೊಲ್ಲೂರು ಮೂಕಾಂಬಿಕೆ

ಕುಂದಾಪುರದಿಂದ ಸುಮಾರು ೬೦ ಕಿಲೋಮೀಟರ್ ದೂರದಲ್ಲಿ ಪಶ್ಚಿಮ ಘಟ್ಟಗಳಲ್ಲಿರುವ ಕೊಡಚಾದ್ರಿ ಬೆಟ್ಟದ ಕಣಿವೆಯಲ್ಲಿ ಈ ಊರು ಇದೆ. ಸೌಪರ್ಣಿಕಾ ನದಿಯ ತೀರದಲ್ಲಿ ಜಗತ್ಪ್ರಸಿದ್ಧವಾದ ಮೂಕಾಂಬಿಕಾ ದೇವಾಲಯವಿದೆ. ಇಲ್ಲಿ ಮೂಕಾಂಬಿಕೆಯು ಶಿವ ಹಾಗೂ ಶಕ್ತಿಯ ಮಿಲನವಾಗಿ ಜ್ಯೊತಿರ್-ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾಳೆ. ಇಲ್ಲಿನ್ ಶ್ರೀಚಕ್ರದಲ್ಲಿರುವ ಪಂಚಲೋಹದ ಚಿತ್ರವು ಇಲ್ಲಿಗೆ ಭೇಟಿ ನೀಡಿದ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟಿತೆಂದು ಹೇಳುತ್ತಾರೆ. ಪಂಚಮುಖ ಗಣೇಶನ ವಿಗ್ರಹವು ಇಲ್ಲಿ ಕಾಣಸಿಗುತ್ತದೆ. ಕರ್ನಾಟಕದ ೭ ಪವಿತ್ರ ಸ್ಥಳಗಳಾದ (ಕೊಲ್ಲೂರು), ಉಡುಪಿ, ಸುಬ್ರಹ್ಮಣ್ಯ, ಕುಂಭಾಶಿ, ಕೋಟೇಶ್ವರ, ಶಂಕರನಾರಾಯಣ, ಗೋಕರ್ಣ ಇದೂ ಒಂದು. ಇಲ್ಲಿನೆ ಒಂದು ಕೋಣೆಯಲ್ಲಿ ಆದಿ ಶಂಕರಾಚಾರ್ಯರು ಧ್ಯಾನದಲ್ಲಿದ್ದಾಗ ಅವರ ಮುಂದೆ ಮೂಕಾಂಬಿಕೆಯು ಪ್ರತ್ಯಕ್ಷವಾದಗ ಅವರು ಮೂಕಾಂಬಿಕೆಯ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿದರು ಎಂದು ಇತಿಹಾಸವಿದೆ. ದೇವಿಯ ಮೇಲಿರುವ ಆಭರಣಗಳನ್ನು ಇಲ್ಲಿಯ ನಗರ ರಾಜರು ಹಾಗೂ ವಿಜಯನಗರದ ರಾಜರುಗಳು ಅರ್ಪಿಸಿದ್ದರು. ೧೮ನೇ ಶತಮಾನದಲ್ಲಿ ಮರಾಠರು ದಂಡಯಾತ್ರೆಗೆ ಇಲ್ಲಿ ಬಂದಾಗ ದೇವಿಯ ಆಭರಣಗಳನ್ನು ಕೊಳ್ಳೆ ಹೊಡೆದರು. ಮೂಕಾಂಬಿಕೆಯ ವಿಗ್ರಹಕ್ಕೆ ಸುಮಾರು ೧೨೦೦ ವರ್ಷಗಳ ಇತಿಹಾಸವಿದೆ. ರಾಣಿ ಚೆನ್ನಮ್ಮಾಜಿಯ ಆಜ್ಞೆಯ ಮೇರೆಗೆ ಇಲ್ಲಿಯ ತುಂಡರಸನಾದ ಹನಗಲ್ಲು ವೀರ ಸಂಗಯ್ಯ ಎಂಬಾತನು ಈ ದೇವಾಲಯದಲ್ಲಿರುವ ಕಲ್ಲಿನ ವಿಗ್ರಹವನ್ನು ಕಂಡುಹುಡಿಕಿದನು. ಕೊಲ್ಲೂರಿನ ಸಮೀಪದಲ್ಲೇ ಅರಸಿನ ಮಕ್ಕಿ ಹಾಗೂ ಗೋವಿಂದ ತೀರ್ಥ ಜಲಪಾತಗಳಿವೆ. ಕೊಡಚಾದ್ರಿ ಬೆಟ್ಟವು ಪರ್ವತಾರೋಹಿಗಳನ್ನು ಆಕರ್ಷಿಸುತ್ತದೆ. ಇಲ್ಲಿಂದ ಕಾಣಸಿಗುವ ಅರಬ್ಬೀ ಸಮುದ್ರದ ದೃಶ್ಯವು ಆನಂದದಾಯಕವಾಗಿದೆ.

[ಬದಲಾಯಿಸಿ] ಶಂಕರನಾರಾಯಣ

ಕುಂದಾಪುರದಿಂದ ೩೨ ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳವು ಹಿಂದೆ ಕ್ರೋಧ ಕ್ಷೇತ್ರವೆಂದು ಹೆಸರಾಗಿತ್ತು. ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿರುವ ೭ ಪುಣ್ಯ ಕ್ಷೇತ್ರಗಳಲ್ಲಿ ಇದೂ ಒಂದಾಗಿದೆ.

[ಬದಲಾಯಿಸಿ] ಬಸ್ರೂರು

ವಾರಾಹಿ ನದಿಯ ದಕ್ಷಿಣ ದಡದಲ್ಲಿರುವ ಈ ಊರು ಅನೇಕ ದೇವಾಲಯಗಳ ಬೀಡಾಗಿದೆ. ಮಧ್ವಾಚಾರ್ಯರ ನಂತರ ದ್ವೈತ ಸಿಧ್ಧಾಂತವನ್ನು ಭೋದಿಸಿದ ವಾದಿರಾಜರು ಜನಿಸಿದ್ದು ಇಲ್ಲೆ ಸಮೀಪದಲ್ಲಿರುವ ಹೂವಿನಕೆರೆ ಎಂಬಲ್ಲಿ. ಒಂದು ಕಾಲದಲ್ಲಿ ಬಹು ದೊಡ್ಡ ವಾಣಿಜ್ಯ ಕೇಂದ್ರವಾಗಿತ್ತು. ಇಂದಿಗೆ ವಾಣಿಜ್ಯ ಕೇಂದ್ರವಾಗಿ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆಯಾದರೂ, ಇಂದಿಗೆ ವಿವಿಧ ಧರ್ಮಗಳ ೪೦ ಸ್ಥಳಗಳು ಇಲ್ಲಿವೆ. ಗೌಡ ಸಾರಸ್ವತ ಬ್ರಾಹ್ಮಣರ ಧಾರ್ಮಿಕ ಕೇಂದ್ರ ಇದು. ಈ ಸಮುದಾಯದ ಜನರ ಭಕ್ತಿಪಾತ್ರವಾದ ಮಹಾಲಸಾ ನಾರಾಯಣಿ ದೇವಾಲಯವು ಇಲ್ಲಿದೆ. ಇತಿಹಾಸದ ಪ್ರಕಾರ ಈ ದೇವಾಲಯವು ಮೂಲಸ್ಥಾನವಾದ ಗೋವಾದ ಮಾರ್ದೋಲಿಯಲ್ಲಿರುವ ಶ್ರೀಮಹಾಲಸಾ ದೇವಸ್ಥಾನದಿಂದ ಸ್ಪೂರ್ತಿಯನ್ನು ಪಡೆದಿದೆ.

[ಬದಲಾಯಿಸಿ] ಕೋಟೇಶ್ವರ

ಈ ಊರಿನಲ್ಲಿ ಸುಪ್ರಸಿಧ್ಧವಾದ ಕೋಟಿಲಿಂಗೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಬಹು ದೊಡ್ಡ ಇತಿಹಾಸವಿದೆ. ಪುರಾಣಗಳ ಪ್ರಕಾರ ಇಲ್ಲಿ ಬ್ರಹ್ಮ ಆದಿಶಕ್ತಿಯು ಇಲ್ಲಿ ತಪಸ್ಸನ್ನು ಮಾಡಿದಾಗ ಮೊದಲನೆಯದಾಗಿ ಲಿಂಗಾಕೃತಿಯ ಒಂದು ಪ್ರಖರವಾದ ಜ್ಯೋತಿಯು ಕಾಣಿಸಿತು. ನಂತರ ಈ ಜ್ಯೋತಿಯು ಒಂದು ಕೋಟಿ ಲಿಂಗಗಳಾಗಿ ಮಾರ್ಪಟ್ಟಿತು. ಈ ಲಿಂಗಗಳಿಂದ ಗಂಗಾಜಲ ಹಾಗೂ ಅಮೃತವು ಬ್ರಹ್ಮಾ ನದಿಗೆ ಹರಿದು ಹೋಯಿತು. ಆದರೆ ಪ್ರಳಯದ ಸಂದರ್ಭದಲ್ಲಿ ಈ ದೇವಾಲಯವು ನಾಶವಾಯಿತು. ನಂತರ ಈ ದೇವಾಲಯದ ಪುನರ್ ನಿರ್ಮಾಣವಾಯಿತು. ಈ ದೇವಾಲಯವು ಪೂರ್ವ ದಿಕ್ಕಿಗೆ ಮುಖ ಮಾಡಿದೆ ಹಾಗೂ ಹಲವಾರು ಶಿಲ್ಪಾಕೃತಿಗಳ ಬೀಡಾಗಿದೆ. ಕೋಟಿ ಲಿಂಗಗಳು ದೇವಲಯದ ಒಳಗಿರುವ ಸುಂದರವಾದ ಬಾವಿಯಲ್ಲಿ ಹಾಗೂ ಪೀಠದಲ್ಲಿ ಇವೆ. ಈ ದೇವಸ್ಥಾನದ ರಥ ಇಡೀ ಜಿಲ್ಲೆಯಲ್ಲೇ ದೊಡ್ದದು. "ಕೋಟಿ ಹಬ್ಬ"ಕ್ಕೆ ಈ ದೇವಸ್ಥಾನ ಬಹಳ ಪ್ರಸಿದ್ಧ.

[ಬದಲಾಯಿಸಿ] ಕಮಲಶಿಲೆ

ಕುಂದಾಪುರದಿಂದ ಸುಮಾರು ೨೦ ಕಿಲೋಮೀಟರುಗಳಷ್ಟು ದೂರದಲ್ಲಿರುವ ಕಮಲಶಿಲೆಯಲ್ಲಿ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಾಲಯವಿದೆ. ಈ ದೇವಳವು ಕುಬ್ಜಾ ನದಿ ಹಾಗೂ ನಾಗತೀರ್ಥಗಳ ಸಂಗಮ ಕ್ಷೇತ್ರ. ಇಲ್ಲಿ ದುರ್ಗೆ ಲಿಂಗ ರೂಪಿಯಾಗಿ ನೆಲೆಸಿದ್ದಾಳೆ. ಲಿಂಗದಲ್ಲಿ ಮೂರು ಸ್ವರ್ಣರೇಖೆಗಳಿದ್ದು ಮಹಾಲಕ್ಷ್ಮೀ, ಮಹಾಕಾಳಿ ಹಾಗೂ ಮಹಾಸರಸ್ವತಿ ಐಕ್ಯವಾಗಿದ್ದಾರೆ. ದೇವಳದ ಸುತ್ತಲೂ ಹೊರಪೌಳಿಯಲ್ಲಿ ಈಶ್ವರ, ಗಣಪತಿ, ಸುಬ್ರಹ್ಮಣ್ಯ, ಹೊಸಮ್ಮ, ಕ್ಷೇತ್ರಪಾಲ, ರಕ್ತೇಶ್ವರಿ, ಹುಲಿದೇವಿ ಮುಂತಾದ ಪರಿವಾರ ದೇವರುಗಳು ನೆಲೆಸಿದ್ದಾರೆ. ದೇವಳದ ಪಕ್ಕದಲ್ಲಿಯೇ ರುದ್ರರಮಣೀಯವಾಗಿ ಕುಬ್ಜಾ ನದಿ ಹರಿಯುತ್ತಿದ್ದು ಸಂಪ್ರದಾಯದಂತೆ ಪ್ರತೀ ವರ್ಷವೂ ದೇವಿಯ ವಿಗ್ರಹ ನದಿಯಿಂದ ತೋಯಲ್ಪಡುತ್ತದೆ. ದೇವಳದ ವಾಯುವ್ಯ ದಿಕ್ಕಿಗೆ ಎತ್ತರದ ಸ್ಥಳದಲ್ಲಿ ಸುಪಾರ್ಶ್ವ ಗುಹೆಯಿದೆ. ಇದು ನಾಗತೀರ್ಥದ ಮೂಲಸ್ಥಳವಾಗಿದೆ. ಗುಹೆಯಲ್ಲಿ ಕಾಳಿ, ಲಕ್ಷ್ಮೀ ಹಾಗೂ ಸರಸ್ವತಿಯ ಸಾನ್ನಿಧ್ಯವಿದೆ. ಗುಹೆಯ ಹೊರಗಡೆ ಹುಲಿಚಾವಡಿ ಎಂಬ ಸ್ಥಳವಿದೆ. ದೇವಿ ವ್ಯಾಘ್ರವಾಹಿನಿಯಾಗಿದ್ದು ಸಂಪ್ರದಾಯದ ಕಟ್ಟುಪಾಡುಗಳು ಮೀರಿ ಹೋದಲ್ಲಿ ಹುಲಿ ಬಂದು ಎಚ್ಚರಿಸುವ ಪರಿಪಾಠ ಇಂದಿಗೂ ಜಾರಿಯಲ್ಲಿದೆ. ವಾರ್ಷಿಕ ರಥೋತ್ಸವ ಸಂದರ್ಭಗಳಲ್ಲಿ ಹುಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚರಿಸಿ ಘರ್ಜಿಸುವುದರ ಮೂಲಕ ರಥೋತ್ಸವಕ್ಕೆ ಕರೆ ನೀಡುವ ಪರಿಪಾಠ ಇಂದಿಗೂ ಜೀವಂತವಾಗಿದೆ. ದೇವಳದಲ್ಲಿ ಪ್ರತೀ ಏಕಾದಶಿಯಂದು ದೇವಿಗೆ ಮೃತ್ತಿಕಾಷ್ಠಿ ಬಂಧವು ಜರುಗುತ್ತದೆ. ಇದಕ್ಕೆ ಬೇಕಾಗುವ ಮೃತ್ತಿಕೆ ಎದುರಿರುವ ಗುಡ್ಡದಿಂದ ತಂದು ಶಾಸ್ತ್ರೋಕ್ತವಾಗಿ ಹದ ಮಾಡಿ ಅಷ್ಟಬಂಧ ಮಾಡುತ್ತರೆ. ವಿಶೇಷವೆಂದರೆ ಅಷ್ಟಬಂಧವಾದ ಬಳಿಕ ಮೃತ್ತಿಕೆ ಎಷ್ಟು ನೀರು ಸುರಿದರೂ ಕರಗುವುದಿಲ್ಲ. ವಿಸರ್ಜಿಸಿದ ಮೃತ್ತಿಕೆಯನ್ನು ಭಕ್ತಾದಿಗಳು ಮೂಲಪ್ರಸಾದ ರೂಪದಲ್ಲಿ ಕೊಂಡೊಯ್ಯುತ್ತಾರೆ. ನವರಾತ್ರಿಯ ಸಂದರ್ಭ ಚಂಡಿಕಾಹವನ, ರಥೋತ್ಸವ, ಕುಂಕುಮಾರ್ಚನೆ, ಬೆಳ್ಳಿರಥ ಸೇವೆ, ಹಾಲಿನ ಪೂಜೆ ಮುಂತಾದ ಸೇವೆಗಳು ನಡೆಯುತ್ತವೆ.

[ಬದಲಾಯಿಸಿ] ಪವಿತ್ರ ರೋಸರಿ ಇಗರ್ಜಿ

೧೬೮೧ನೇ ಇಸವಿಯಲ್ಲಿ ಫಾದರ್ ಜೋಸೆಫ್ ವಾಸ್ರವರಿಂದ ಈ ಇಗರ್ಜಿಯು ಸ್ಥಾಪಿಸಲ್ಪಟ್ಟಿತು. ಉಡುಪಿ ಜಿಲ್ಲೆಯ ಪ್ರಮುಖ ಇಗರ್ಜಿಗಳಲ್ಲಿ ಇದೂ ಒಂದು.

[ಬದಲಾಯಿಸಿ] ಉಪ್ಪಿನಕುದ್ರು

ಹೆಸರೇ ಸೂಚಿಸುವಂತೆ ಈ ದ್ವೀಪವು ಕುಂದಾಪುರದಿಂದ ೬ ಕಿಲೋಮೀಟರ್ ಉತ್ತರಕ್ಕೆ ಇದೆ.

[ಬದಲಾಯಿಸಿ] ಸಾಲಿಗ್ರಾಮ

ಕುಂದಾಪುರದಿಂದ ೧೫ ಕಿಲೋಮೀಟರ್ ದೂರದಲ್ಲಿರುವ ಸಾಲಿಗ್ರಾಮದಲ್ಲಿ ಉಗ್ರನರಸಿಂಹ ಹಾಗೂ ಆಂಜನೇಯ ದೇವಾಲಯಗಳಿವೆ. ಆಂಜನೇಯ ದೇವಲಯವು ಉಗ್ರನರಸಿಂಹ ದೇವಾಲಯಕ್ಕೆ ಮುಖ ಮಾಡಿ ನಿಂತಿದೆ. ಬಹಳ ಉಗ್ರನಾದ ಸರಸಿಂಹನ್ನು ಆಂಜನೇಯನು ಸಂತೈಸುತ್ತಾನೆ ಎಂದು ಪ್ರತೀತಿ.

[ಬದಲಾಯಿಸಿ] ಹಟ್ಟಿಯಂಗಡಿ

ಹಟ್ಟಿಯಂಗಡಿ ಗಣಪತಿ
ಹಟ್ಟಿಯಂಗಡಿ ಗಣಪತಿ

೮ನೇ ಶತಮಾನದಲ್ಲಿ ಸ್ಥಾಪಿತವಾದ ಗಣಪತಿಯ ದೇವಸ್ಥಾನವು ಇಲ್ಲ್ಲಿದೆ. ಈ ದೇವಾಲಯದ ಸುತ್ತಲೂ ಹಲವಾರು ಪ್ರಾಚೀನ ದೇವಾಲಯಗಳು ಹಾಗೂ ಜೈನ ಬಸದಿಗಳಿವೆ. ೭ನೇ ಹಾಗೂ ೮ನೇ ಶತಮಾನದಲ್ಲಿ ಗೋಷ್ಠಿಪುರವೆಂದು (ಅನೇಕ ವಿಚಾರ ಗೋಷ್ಠಿಗಳು ಇಲ್ಲಿ ನಡೆದುದರಿಂದ) ಹೆಸರಾಗಿದ್ದ ಈ ಊರು, ತುಳುನಾಡನ್ನು ಆಳಿದ ಅಳುಪ ರಾಜರ ರಾಜಧಾನಿಯಾಗಿತ್ತು.

[ಬದಲಾಯಿಸಿ] ಕಿರಿಮಂಜೇಶ್ವರ

ಕುಂದಾಪುರದಿಂದ ೨೨ ಕಿಲೋಮೀಟರ್ ದೂರದಲ್ಲಿರುವ ಈ ಊರಿನಲ್ಲಿ, ಬಹಳ ಸುಂದರ ಪರಿಸರದ ನಡುವೆ ಕಿರಿಮಂಜೇಶ್ವರ ದೇವಾಲಯವಿದೆ. ಅಗಸ್ತ್ಯ ಮುನಿಗಳ ಹೆಸರಿನ, ಪುರಾತನ ಅಗಸ್ತ್ಯೇಶ್ವರ ದೇವಸ್ಥಾನವೂ ಇಲ್ಲಿದೆ.

[ಬದಲಾಯಿಸಿ] ಸೌಕೂರು

ಇಲ್ಲಿನ ದುರ್ಗಾಪರಮೇಶ್ವರಿ ದೇವಸ್ಥಾನವು ಕುಂದಾಪುರದಿಂದ ೨೦ ಕಿಲೋಮೀಟರ್ ಗಳಷ್ಟು ದೂರದಲ್ಲಿದೆ. ಈಗ ಈ ದೇವಲಯದ ಜೀರ್ಣೋದ್ಧಾರವು ಭರದಿಂದ ಸಾಗಿದೆ.

[ಬದಲಾಯಿಸಿ] ಕೋಡಿ ಸಮುದ್ರತೀರ

ಕುಂದಾಪುರದಿಂದ ೪ ಕಿಲೋಮೀಟರ್ ದೂರದಲ್ಲಿರುವ ಕೋಡಿಯು ಅರಬ್ಬೀ ಸಮುದ್ರದ ತೀರದಲ್ಲಿದೆ. ಉಡುಪಿ ಜಿಲ್ಲೆಯ ನಯನ ಮನೋಹರ ಕಡಲತೀರಗಳಲ್ಲಿ ಇದೂ ಒಂದು. Kodi is a Beautity full place in Udupi dist.kodi have 4 beautifull mosque.all mosque are near by Kodi sea.1)Billal Juma Mosque 2)Mohiddin Juma Mosque 3)Badriya Juma Mosque 4)Halavalli Juma Mosque.

[ಬದಲಾಯಿಸಿ] ಕುಂದಾಪುರದ ಪ್ರಸಿದ್ಧ ವ್ಯಕ್ತಿಗಳು

[ಬದಲಾಯಿಸಿ] ಹೊರಗಿನ ಅಂತರ್ಜಾಲ ತಾಣಗಳು

ಇತರ ಭಾಷೆಗಳು