ನಟರಾಜ್ ಹುಳಿಯಾರ್

From Wikipedia


ಹು ಲ ನಟರಾಜ್ - ಎಂದರೆ ಯಾರು ಎಂಬ ಪ್ರಶ್ನೆ ಸಹಜ. ನಟರಾಜ್ ಹುಳಿಯಾರ್ ಒಂದು ಕಾಲಕ್ಕೆ ವ್ಯಂಗ್ಯ ಚಿತ್ರಕಾರರಾಗಿದ್ದರು ಎಂಬ ವಿಷಯ ಅನೇಕರಿಗೆ ಗೊತ್ತಿಲ್ಲ (ಅವರಿಗೂ ಮರೆತುಹೋಗಿರಬಹುದು). ಹು ಲ ನಟರಾಜ್ ಎಂಬ ಹೆಸರಿನಲ್ಲಿ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಕಾರ್ಟೂನಿಸ್ಟ್ ಇಂದು ಕನ್ನಡದ ಮಹತ್ವದ ವಿಮರ್ಶಕ. ಡಿ ಆರ್ ನಾಗರಾಜ್ ಚಿಂತನಾ ಕ್ರಮದ ಮುಂದುವರಿಕೆ.

ತಿಪಟೂರಿನ ಹುಳಿಯಾರಿನ ಈ ಹುಡುಗ ಪಲ್ಲಾಗಟ್ಟಿ ಅಡವಪ್ಪ ಕಾಲೇಜಿನಿಂದ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಸ್ಪರ್ಧೆಗಳಲ್ಲಿ ಗೆಲ್ಲುತ್ತಿದ್ದ. ತಾಜಾ ಅನುಭವ, ನೇರವಂತಿಕೆ, ಉಕ್ಕುತ್ತಿದ್ದ ಯೌವನಕ್ಕೆ ಕೊಟ್ಟ ಮಾತು ಇವರ ಸ್ಪೆಷಾಲಿಟಿಯಾಗಿತ್ತು.

ನಂತರ ಎಂಎ ಇಂಗ್ಲಿಷ್ ಗಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ವಲಸೆ. ಅಲ್ಲಿಯವರೆಗೂ ಸಂಗಾತಿಯಾಗಿದ್ದ ಕವಿತೆಯನ್ನು ಪಕ್ಕಕ್ಕೆ ಸರಿಸಿ ಹುಳಿಯಾರ್ ಕಥೆಯತ್ತ ಮುಖ ಮಾಡಿ ನಿಂತರು. ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲೂ ಗೆದ್ದರು. “ಮತ್ತೊಬ್ಬ ಸರ್ವಾಧಿಕಾರಿ” ಕಥಾ ಸಂಕಲನ ಎದ್ದು ಬಂತು. ಕ್ಲೀಷೆ ನಟರಾಜ್ ಗೆ ಸದಾ ಇರಿಸುಮುರಿಸು ತರಿಸುವ ವಿಷಯ. ಆ ಕಾರಣಕ್ಕಾಗಿಯೇ ಇರಬೇಕು, ನೋಟದಲ್ಲಿ ಹೊಸತನವಿರಲಿ, ಒಂದಷ್ಟು ಗಾಳಿ ಬೆಳಕು ಆಡಲಿ ಎಂದು ನಿರ್ಧರಿಸಿದರು.

ಲಂಕೇಶರ ಒಡನಾಟ, ಡಿ ಆರ್ ನಾಗರಾಜರ ಅಖಾಡ ನಟರಾಜ್ ಹುಳಿಯಾರ್ ಒಳಗಿನ ಗಂಭೀರ ವಿಮರ್ಶಕನನ್ನು ಒರೆಗೆ ಹಚ್ಚಿತು. ನಟರಾಜ್ ವ್ಯಕ್ತಿತ್ವದಲ್ಲಿರುವ ತುಂಟತನ, ಆರೋಗ್ಯಕರ ವ್ಯಂಗ್ಯ ಅವರ ಬರಹಗಳನ್ನೂ ಹೊಸದಾಗಿ ರೂಪಿಸಿತು. ಲಂಕೇಶರ ಅಡ್ಡೆಯಲ್ಲಿ ತಮಗೆ ಆ ವೇಳೆಗೇ ಇದ್ದ ಸಾಮಾಜಿಕ ನೋಟವನ್ನು ಪಳಗಿಸಿಕೊಂಡರು. ಡಿಆರ್, ವಿಮರ್ಶೆಗೆ ಬೇಕಾಗಿದ್ದ ಪರಿಕರಗಳನ್ನು ಸಾಣೆ ಹಿಡಿದರು.

ಬೆಂಗಳೂರು ವಿವಿಯ ಕನ್ನಡ ವಿಭಾಗದಲ್ಲಿ ತೌಲನಿಕ ಅಧ್ಯಯನ ಬೋಧಿಸುವ ಹುಳಿಯಾರ್, ಡಿಆರ್ ಅಡಿ ಆಫ್ರಿಕನ್ ಸಾಹಿತ್ಯದ ಸಂಶೋಧನೆ ನಡೆಸಿದರು. “ರೂಪಕಗಳ ಸಾವು” ಕವಿತೆಗಳ ಸಂಕಲನ ಸಹ ಅದಾಗಲೇ ಬಂದಿತ್ತು.

ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿನಿ ಅನಿತಾರನ್ನು ಬುಟ್ಟಿಗೆ ಹಾಕಿಕೊಂಡ ಹುಳಿಯಾರ್, ಮಗನಿಗೆ ಇಟ್ಟ ಹೆಸರು ಷೋಯೆಂಕಾ. ಆಫ್ರಿಕಾದ ಹಾಡಿಗೆ ನಟರಾಜ್ ಮಾರುಹೋದ ರೀತಿ ಇದು. ಜಾತಿಗಳನ್ನು ಕಿತ್ತೊಗೆಯುವುದರ ಮೂಲಕವೇ ಪಂಪ ಕನಸಿದ ಮಾನವನನ್ನು ಸೃಷ್ಠಿಸಲು ಎಂಬ ಕಾರಣಕ್ಕೆ ಅಂತರ್ಜಾತೀಯ ವಿವಾಹಗಳ ವೇದಿಕೆ “ಮಾನವ ಮಂಟಪ”ಕ್ಕೆ ಕೈ ಜೋಡಿಸಿದರು. ಜಾಗತೀಕರಣದ ಮಧ್ಯೆ ಹಳ್ಳಿಯ ಹುಡುಗರು ಎದುರಿಸುತ್ತಿರುವ ತಲ್ಲಣಗಳಿಗೆ ಒಂದು ಕಾಲುದಾರಿಯನ್ನಾದರೂ ನಿರ್ಮಿಸಲು ಇಂಗ್ಲಿಷ್ ಕಲಿಕೆಯ ಪರವಾಗಿ ನಿಂತರು.

ಲಂಕೇಶ್ ಪತ್ರಿಕೆ ನೀಡಿದ್ದ ಒಂದು ಆರೋಗ್ಯಕರ ಕಣ್ಣೋಟ ಇಲ್ಲವಾಗುತ್ತಿರುವುದು ನಟರಾಜ್ ಗೆ ಎಲ್ಲೋ ಗಾಳಿ ಬೆಳಕು ಇಲ್ಲವಾಗುತ್ತಿದೆ ಎನಿಸಿರಬೇಕು. ಆ ಕಾರಣಕ್ಕಾಗಿಯೇ ಆದದ್ದಾಗಲಿ ಎಂದು ಅಥವಾ ಆದದ್ದೆಲ್ಲಾ ಒಳಿತೇ ಆಯಿತು ಎಂಬಂತೆ ಪತ್ರಿಕೋದ್ಯಮಕ್ಕೆ ಜಿಗಿದಿದ್ದಾರೆ. “ಕನ್ನಡ ಟೈಮ್ಸ್” (ಟೈಮ್ಸ್ ಆಫ್ ಇಂಡಿಯಾದ ಕನ್ನಡ ರೂಪವಲ್ಲ) ಟ್ಯಾಬ್ಲಾಯ್ಡ್ ಆರಂಭವಾಗಿದೆ. ಈ ಕನ್ನಡ ಟೈಮ್ಸ್ ನಿಂದಾಗಿ ಗಾಳಿ ಬೆಳಕು ಮತ್ತೆ ಆಡುತ್ತಿದೆ.

ಲಂಕೇಶ್ ಪತ್ರಿಕೆಗೆ ನಟರಾಜ್ ಹುಳಿಯಾರ್ ಬರೆದ ಅಂಕಣ “ಗಾಳಿ ಬೆಳಕು” ಈಗಾಗಲೇ ಪುಸ್ತಕವಾಗಿದೆ. ಅದಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿದೆ. ಇವರ ಕೃತಿಗಳನ್ನು ಅರಸಿ ಬಿ ಎಂ ಇನಾಮದಾರ್ ಪ್ರಶಸ್ತಿ, ಕಥೆಗಳ ಅನುವಾದಕ್ಕಾಗಿ ದೆಹಲಿಯ ಪ್ರತಿಷ್ಠಿತ “ಕಥಾ” ಪ್ರಶಸ್ತಿ ಕೂಡ ಲಭಿಸಿದೆ. ಅವಧಿಗಾಗಿ ಅವರು ಇಂದಿನಿಂದ ವಾರಕ್ಕೊಮ್ಮೆ ”ಗಾಳಿ ಬೆಳಕು” ಅಂಕಣ ಬರೆಯುತ್ತಿದ್ದಾರೆ. ನಂತರ ಕನ್ನಡ ಟೈಮ್ಸ್ ನಲ್ಲಿ ಇದು ಮುದ್ರಿತವಾಗಲಿದೆ.

ಇನ್ನು ನೀವುಂಟು, ನಟರಾಜ್ ಉಂಟು. ನಿಮ್ಮ ಮಧ್ಯೆ “ಗಾಳಿ ಬೆಳಕು”.

(ಸಂಪರ್ಕಕ್ಕೆ: natarajhuliyar@gmail.com ದೂರವಾಣಿ: ೦೮೦-೨೮೬೦೩೬೬೩)


ಪರಿವಿಡಿ

[ಬದಲಾಯಿಸಿ] ಲಂಕೇಶ್ ಕಂಡಂತೆ ನಟರಾಜ್ ಹುಳಿಯಾರ್

ನಟರಾಜ್ ಅನೇಕ ಕಾರಣಕ್ಕೆ ಎಲ್ಲರ ಕುತೂಹಲ ಕೆರಳಿಸಿರುವ ವ್ಯಕ್ತಿ. ಪುಸ್ತಕದ ಸಂವೇದನೆಯನ್ನು ಪರೀಕ್ಷಿಸಿ ಬೆಲೆ ಕಟ್ಟಬಲ್ಲ ಈತ, ಮಹಾ ನಿಷ್ಠುರ ವ್ಯಕ್ತಿ. ಸಾಹಿತಿ ತನ್ನ ಅನುಭವ ನಿಷ್ಠೆ ಮತ್ತು ವಿಪರ್ಯಾಸ ಪ್ರಜ್ಞೆಯನ್ನು ಕಳೆದುಕೊಂಡರೆ ಛೀತ್ಕಾರ ಮತ್ತು ಕಾಡು ಹರಟೆಯಲ್ಲಿ ಪರ್ಯವಸಾನಗೊಳ್ಳುತ್ತದೆ ಎಂಬುದನ್ನು ನಟರಾಜ್ ಅರಿತಿದ್ದಾನೆ. ನಟರಾಜ್ ಎಂಥವನೆಂದು ನೀವೆಲ್ಲ ಬಲ್ಲಿರಿ. ಮಹಾ ಪ್ರೀತಿಯ, ತಮಾಷೆಯ ಈತ ಉಗ್ರ ಪ್ರಾಮಾಣಿಕ.

-ಪಿ ಲಂಕೇಶ್


[ಬದಲಾಯಿಸಿ] ನಟರಾಜ್ ಹುಳಿಯಾರ್ ಬಗ್ಗೆ ಅನಂತಮೂರ್ತಿ

ನಟರಾಜ್ ಹುಳಿಯಾರ್ ಬಗ್ಗೆ ಪ್ರಾಮಾಣಿಕ ಮೆಚ್ಚುಗೆಯ ಮಾತುಗಳನ್ನು ಓದಿ ಸಂತೋಷವಾಯಿತು. ಒಂದು ಹೊಸ ಕವಿತೆ ಓದಿದರೆ ಒಂದು ಹೊಸ ಕಥೆ ಓದಿದರೆ ಅದರ ಬಗ್ಗೆ ಖುಶಿಯಾಗಿ ನಾವೆಲ್ಲರೂ ಹಿಂದೆ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತ ಇದ್ದೆವು. ಜಗಳವಾಡುತ್ತ ಇದ್ದೆವು. ಸಾಹಿತ್ಯ ಜೀವಂತವಾಗಿತ್ತು. ಅದರಲ್ಲಿ ಸಣ್ಣ ಪೊಲಿಟಿಕ್ಸ್ ಇರಲಿಲ್ಲ. ನಟರಾಜ್ ಅದನ್ನು ನಮ್ಮ ಈ ಕಾಲದಲ್ಲಿ ಮಾಡಬಲ್ಲವ ಎಂದು ನನ್ನ ಭಾವನೆ. “ಗಾಳಿ ಬೆಳಕು” ಓದುವೆ. ಇಷ್ಟವಾದಾಗ ಯಾರಿಗಾದರೂ ಹೇಳುವೆ

.

[ಬದಲಾಯಿಸಿ] ಮುಂದಿನ ದಿನಗಳಿಗೆ ದಾರಿ

ಜಿ ಎನ್ ಮೋಹನ್

ನಟರಾಜ್ ಹುಳಿಯಾರ್ ಮತ್ತು ಅವನ ಸಾಂಸ್ಕೃತಿಕ ಬರಹಗಳ ಸಂಕಲನ “ಗಾಳಿ ಬೆಳಕು” ಬಗ್ಗೆ ಬರೆದದ್ದು ಓದಿದೆ. ನಾನು ಈ ಹಿಂದೆ “ಹೊಸತು”ವಿನಲ್ಲಿ ಬರೆದಿದ್ದ ಬರಹ ನೆನಪಾಯಿತು. “ಗಾಳಿ ಬೆಳಕು” ಕುರಿತು ನನ್ನ ನೋಟದ ಆಯ್ದ ಭಾಗಗಳನ್ನು ನಿಮಗೆ ಕಳಿಸುತ್ತಿದ್ದೇನೆ.

ನಟರಾಜ್ ಬರಹ ನನ್ನನ್ನು ಕಾಡಿಸಲು ಹಲವು ಕಾರಣಗಳಿವೆ. ನಾವಿಬ್ಬರೂ ಒಟ್ಟಿಗೇ ಕವಿತೆ ಕಟ್ಟಿದವರು. ಸಾಹಿತ್ಯವನ್ನು ಮಥಿಸುತ್ತ ಒಂದಿಷ್ಟು ಕಾಲ ಓಡಾಡಿದವರು. ಹಾಗಾಗಿ, ಇವನ ಬರವಣಿಗೆಯ ಬಗ್ಗೆ ಸದಾ ಕುತೂಹಲದ ಕಣ್ಣು. ಇನ್ನುಳಿದಂತೆ ನಾವಿಬ್ಬರೂ ಒಂದೇ ಕಾಲಮಾನದಲ್ಲಿ ಪಯಣಿಸುತ್ತಿದ್ದೇವೆ. ಮಾರ್ಕ್ಸ್ ವಾದ-ಲೋಹಿಯಾ ವಾದ, ಕೆಂಪು ರೈತ ಸಂಘ-ಹಸಿರು ರೈತ ಸಂಘ, ತುರ್ತು ಪರಿಸ್ಥಿತಿ ಉಂಟುಮಾಡಿದ ಭಯದ ನಂತರದ ಕಾಲದಲ್ಲಿ, ಗುಂಡೂರಾವ್ ಸರ್ಕಾರದ ದಬ್ಬಾಳಿಕೆ ಮಧ್ಯೆ, ಪೇಪರ್ ನಂತರದ ಟಿವಿ ಕಂಪ್ಯೂಟರ್ ಮಾಧ್ಯಮಗಳು ಬಂದಿಳಿದ, ಹೆಗಡೆ ಸರ್ಕಾರ ತಣ್ಣಗೆ ಚಳವಳಿಯ ಚೈತನ್ಯ ಕಸಿದುಕೊಂಡ, ನರಗುಂದ-ನವಲಗುಂದ ರೈತರ ಹೋರಾಟ, ಕನ್ನಡದ ಗೋಕಾಕ್ ಚಳವಳಿ, ಪತ್ರಿಕೋದ್ಯಮದಲ್ಲಿ ಕ್ಯಾಸೆಟ್ ಲೋಕ ಕಂಡ ಭಿನ್ನದನಿ, ಕನ್ನಡ ಕಾವ್ಯದ ಬದಲಾದ ಮುಖಗಳು… ಇವೆಲ್ಲವನ್ನೂ ಕಂಡ ತಲೆಮಾರಿನವರು ನಾವು.

ನಾನು ಸಂವಹನದ ವಿದ್ಯಾರ್ಥಿ. ನಟರಾಜ್ ಇಂಗ್ಲಿಷ್ ಸ್ನಾತಕೋತ್ತರ ಅಧ್ಯಯನ ಮಾಡಿದ ಸಾಹಿತ್ಯದ ವಿದ್ಯಾರ್ಥಿ. ಹಾಗಾಗಿ ನಾವಿಬ್ಬರೂ ನಮ್ಮದೇ ದಾರಿಗಳಲ್ಲಿ ಈ ಮೇಲಿನ ಎಲ್ಲಾ ಘಟ್ಟಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಟರಾಜ್ ಈ ಪ್ರಶ್ನೆಗಳಿಗೆ ಕಂಡುಕೊಳ್ಳುವ ಉತ್ತರಗಳು ಹೇಗಿದೆ ಎಂಬ ಕುತೂಹಲದ ಜೊತೆಗೇ, ನಾನು ಕಂಡುಕೊಂಡ ಉತ್ತರದ ಜೊತೆಗೆ ತಾಳೆ ನೋಡುವುದೂ ಅಭ್ಯಾಸವಾಗಿದೆ. ನಟರಾಜ್ ಬರೆದ ಬರಹಗಳು ನನ್ನ ತಿಳುವಳಿಕೆಯನ್ನು ವಿಸ್ತರಿಸಿವೆ. “ಗಾಳಿ ಬೆಳಕು” ಈ ರೀತಿಯಲ್ಲೇ ಪ್ರತಿಯೊಬ್ಬರ ತಿಳುವಳಿಕೆಯನ್ನೂ ವಿಸ್ತರಿಸುವ ಒಂದು ಮಹತ್ವದ ಪ್ರಯತ್ನ.

ನಟರಾಜ್ ನಮ್ಮ ಇಂದಿನ ಹಲವು ವಿಮರ್ಶಕರಿಗಿಂತ ಭಿನ್ನ. ಸಾಮಾಜಿಕ ಚಳವಳಿಯ ಅಂಗಳದಿಂದ ಈತ ಸಾಹಿತ್ಯ ಕ್ಷೇತ್ರಕ್ಕೆ ಜಿಗಿದ ಕಾರಣ ಈತನ ಬರಹ ಎಲ್ಲಾ ಸಂದರ್ಭಗಳಲ್ಲೂ ಸಮಾಜವನ್ನು ತನ್ನ ಕೇಂದ್ರವಾಗಿಟ್ಟುಕೊಂಡಿದೆ. ಒಂದು ಕೃತಿ, ಒಂದು ಮಾತು, ಒಂದು ಹಾಡು, ಒಬ್ಬ ಸಾಹಿತಿ-ಎಲ್ಲರೂ ನಟರಾಜನ ಸಮಾಜ ನಿಕಷಕ್ಕೊಡ್ಡಿಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ನಟರಾಜನ ಬರಹ ಇಂದಿನ ದಿನಗಳ ವಿಮರ್ಶೆ ಮಾಡುತ್ತ, ಮುಂದಿನ ದಿನಗಳಿಗೆ ದಾರಿ ತೋರಿಸುತ್ತದೆ. ನಮ್ಮ ನಡುವಿನದನ್ನೇ ಮಾತನಾಡುತ್ತ ಸಾಹಿತ್ಯದ ಒಳದಾರಿಗಳತ್ತ ಕೈ ಹಿಡಿದು ನಡೆಸುತ್ತದೆ.


[ಬದಲಾಯಿಸಿ] ನಟರಾಜ್ ನನಗೇಕೆ ಇಷ್ಟ?

--ಕೆ ಫಣಿರಾಜ್

ಲಂಕೇಶ್ ಪತ್ರಿಕೆ ಕಾಲದಿಂದ ನಟರಾಜನ “ಗಾಳಿ ಬೆಳಕು” ಅಂಕಣವನ್ನು ಇಷ್ಟಪಟ್ಟು ಓದಿಕೊಂಡು ಬಂದವರಲ್ಲಿ ನಾನೂ ಒಬ್ಬ. ವರ್ಷಾಂತರಗಳ ಕಾಲ ನಟರಾಜ್ ಬರೆಯದಿದ್ದಾಗಲೂ, ಅವನ ಪುಸ್ತಕದ ಕೆಲವು ಲೇಖನಗಳನ್ನು ನೆನೆಸಿಕೊಂಡು ಓದುತ್ತಿದ್ದೆ. ಬರಹದ ವಿಷಯದಲ್ಲಿ, ನಮಗೆ ಆ ಕ್ಷಣಕ್ಕೆ ಅನಿಸಿದ್ದನ್ನು ನಿಷ್ಠುರವಾಗಿ ಹೇಳುವುದೇ ಪ್ರಾಮಾಣಿಕತೆ ಎಂಬುದು ನನ್ನ ನಂಬಿಕೆ. ನಟರಾಜನ ಬರಹದ ಬಗ್ಗೆ ಇರುವ ವಾಂಛೆಗೂ ಇದೇ ಕಾರಣವಿರಬಹುದು. ಎರಡನೆಯದು, ಎಂದೂ ಉಡಾಫೆಯಾಗದಂತೆ ಉಕ್ಕುವ ತುಂಟತನ ಮತ್ತು “ಪನ್”. ಮೂರನೆಯದು: ಎಷ್ಟೋ ಸಾರಿ ಸಂವಹನೆಯ ಸುಖಕ್ಕಾಗಿ ವಿಷಯವನ್ನು ಹೃಸ್ವಗೊಳಿಸುತ್ತಾನೆ ಅನ್ನಿಸಿದರೂ, ಇದೇ ವಿಷಯದ ಬಗ್ಗೆ “ಒಂದಿಷ್ಟು ಗಹನವಾಗಿ-ಆದರೆ ಸರಳವಾಗಿ, ಚುರುಕಾಗಿ-ಬರೆಯುವುದಿದ್ದರೆ ಬರಿ ನೋಡೋಣ” ಎನ್ನುವ ಆಸೆ-ಆಹ್ವಾನಗಳನ್ನೂ ಹುಟ್ಟಿಸುತ್ತಾನೆ. ತನ್ನ ಕಾಲದ ಬರಹಗಾರರಿಗೆ ಬರೆಯಬೇಕು ಎನ್ನುವ ಕಿಚ್ಚು ಮೂಡಿಸುವ ಬರಹದ ಶಕ್ತಿ ಕಡಿಮೆಯದಲ್ಲ. ಬರೆಯುವ “ಅದೃಷ್ಟ” ಯಾವತ್ತೂ ನಿನಗಿರಲಿ ಗುರುವೇ.